ಹುಬ್ಬಳ್ಳಿ : ಅವಳಿ ನಗರ ಮಹಾನಗರ ಪಾಲಿಕೆಯ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಲೋಪಗಳ ಸರಣಿ ಮುಂದುವರಿದಿದೆ. ಈ ಮೊದಲು ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದ ವಾರ್ಡ್ವಾರು ಕ್ಷೇತ್ರ ಮರುವಿಂಗಡಣೆ, ಮೀಸಲಾತಿ ನಿಗದಿ ಬಳಿಕ ಇದೀಗ ಕರಡು ಮತದಾರರ ಪಟ್ಟಿಯಲ್ಲಿ ಯಡವಟ್ಟು ಮಾಡಿದೆ. ನಗರಾಭಿವೃದ್ಧಿ ಇಲಾಖೆ ಸೂಚನೆಯನ್ನು ಧಿಕ್ಕರಿಸಿ ಮನಬಂದಂತೆ ಕರಡು ಮತದಾರರ ಪಟ್ಟಿ ಸಿದ್ಧಪಡಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಬಹಿರಂಗಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಪ್ರತಿ ವಾರ್ಡ್ಗಳಿಗೆ ಹಂಚಿಕೆ ಮಾಡಿರುವ ಮತದಾರರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. 9ರಿಂದ 14 ಸಾವಿರ ಮತದಾರರಿಗೆ ಒಂದರಂತೆ ವಾರ್ಡ್ ವಿಂಗಡಣೆ ಮಾಡಲು ಸೂಚನೆ ಮಾಡಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಮನಬಂದಂತೆ ಮತದಾರರ ಪಟ್ಟಿ ಸಿದ್ಧಪಡಿಸಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್, ಪಟ್ಟಿಯಲ್ಲಿ ಕೆಲ ಗೊಂದಲವಾಗಿರುವುದು ಗಮನಕ್ಕೆ ಬಂದಿದ್ದು, ಸರಿಪಡಿಸುವ ಭರವಸೆ ನೀಡಿದ್ದಾರೆ.
ಕೆಲ ವಾರ್ಡ್ಗಳಲ್ಲಿ 6 ಸಾವಿರಕ್ಕಿಂತ ಕಡಿಮೆ ಮತದಾರರಿದ್ದರೆ, ಒಂದಿಷ್ಟು ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ವಾರ್ಡ್ವಾರು ಮತದಾರರ ಸಂಖ್ಯೆಯಲ್ಲಿ ಇಷ್ಟರಮಟ್ಟಿಗೆ ವ್ಯತ್ಯಾಸ ಕಂಡು ಬಂದಿರುವುದು ದೊಡ್ಡ ಲೋಪವೇ ಆಗಿದೆ. ಇದರಿಂದ ಮತದಾರರ ಪಟ್ಟಿ ತಯಾರಿಕೆಯಲ್ಲಿ ಪಾಲಿಕೆ ಅಧಿಕಾರಿಗಳು ಎಡವಿರುವುದು ಸ್ಪಷ್ಟವಾಗುತ್ತಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ನಗರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಮತದಾರರ ಸಂಖ್ಯೆ ಶೇ.70ರಷ್ಟು ಇರುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ಲೆಕ್ಕಚಾರದಲ್ಲಿ ನೋಡಿದರೆ ಪ್ರತಿ ವಾರ್ಡ್ನ ಮತದಾರರ ಸಂಖ್ಯೆ 6,300 ರಿಂದ 9,800 ನಡುವೆ ಇರಬೇಕಿತ್ತು. ಇನ್ನೊಂದು ಲೆಕ್ಕಾಚಾರದಲ್ಲಿ ಅವಳಿ ನಗರದ ಒಟ್ಟು ಮತದಾರರ ಸಂಖ್ಯೆಯನ್ನು (8,13,257) 82 ವಾರ್ಡ್ಗಳಿಗೆ ಸಮಾನವಾಗಿ ಹಂಚಿಕೆ ಮಾಡಿದರೆ ಸರಾಸರಿ ಮತದಾರರ ಸಂಖ್ಯೆ 9,918 ಇರಬೇಕು. ಆದರೆ, ಪಾಲಿಕೆ ಅಧಿಕಾರಿಗಳು ಕೆಲ ವಾರ್ಡ್ಗಳಲ್ಲಿ ಮತದಾರರ ಸಂಖ್ಯೆಯನ್ನು 5-6 ಸಾವಿರ ನಡುವೆ ವಿಂಗಡಿಸಲಾಗಿದೆ. ಅಲ್ಲದೇ ಕೆಲ ವಾರ್ಡ್ಗಳ ಮತದಾರರ ಸಂಖ್ಯೆ 13-15 ಸಾವಿರ ದಾಟಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೈಕೋರ್ಟ್ ತೀರ್ಪಿನಂತೆ ಚುನಾವಣೆ ಹಾಗೂ ಮತದಾರರ ಪಟ್ಟಿ ತಯಾರಿ ಕೆಲಸ ಮುಂದುವರಿಸಿ ಎಂದು ಆಯೋಗವು ಪಾಲಿಕೆಗೆ ಸೂಚಿಸಿತ್ತು. ಆಯೋಗದ ಭಯದಿಂದ ಪಾಲಿಕೆ ಅಧಿಕಾರಿಗಳು ತರಾತುರಿಯಲ್ಲಿ ಮತದಾರರ ಪಟ್ಟಿ ತಯಾರಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆಯೋಗ ಸೂಚಿಸಿದ ವೇಳಾಪಟ್ಟಿಯಂತೆ ಜೂನ್ 28ರಂದೇ ಕರಡು ಮತದಾರರ ಪಟ್ಟಿ ಪ್ರಕಟಿಸಬೇಕೆಂಬ ಒತ್ತಡಕ್ಕೆ ಸಿಲುಕಿದ ಪಾಲಿಕೆ ಅಧಿಕಾರಿಗಳು ಕಾಟಾಚಾರದ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಓದಿ: ಸಹಾಯ ಮಾಡುವ ಹೃದಯ ಶ್ರೀಮಂತಿಕೆ.. ವಿಶೇಷಚೇತನ ಭಿಕ್ಷುಕನಿಗೆ ಹೊಸಜೀವನ ನೀಡಿದ ವಿದ್ಯಾರ್ಥಿ..