ಧಾರವಾಡ: ನ.26ರಂದು ಬುಡಕಟ್ಟು ಜನಾಂಗದಿಂದ ಮೈಸೂರಿನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಿಂದ ರ್ಯಾಲಿ ನಡೆಯಲಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರನ್ನು ಸೇರಿಸಬೇಕು ಎಂಬ ವಿಚಾರ ಇದೆ ಎಂದು ಹೇಳಿದರು.
ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಬೇರೆಯವರು ಪಡೆಯುತ್ತಿದ್ದಾರೆ: ರಾಜ್ಯದಲ್ಲಿ ಸುಮಾರು 52ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿದ್ದು, 65 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಎಲ್ಲ ಬುಡಕಟ್ಟು ಜನಾಂಗಗಳ 25 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ರ್ಯಾಲಿಗೆ ಬರಲಿದ್ದಾರೆ. ಇದರ ಉದ್ದೇಶ ಬೇರೆಯವರು ಬುಡಕಟ್ಟು ಜನಾಂಗದವರಿಗೆ ಮೋಸ ಮಾಡಿ, ನಮ್ಮ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅನ್ಯ ಧರ್ಮಿಯರು ಬುಡಕಟ್ಟು ಜನಾಂಗದವರನ್ನು ಮತಾಂತರ ಮಾಡುತ್ತಿದ್ದಾರೆ. ಬುಡಕಟ್ಟು ಜನಾಂಗಕ್ಕೆ ತಮ್ಮದೆ ಆದ ಸಂಪ್ರದಾಯ, ಸಂಸ್ಕೃತಿ ಇದೆ. ಅವರು ಒಮ್ಮೆ ಮತಾಂತರ ಆದರೆ ಇವುಗಳನ್ನು ಕಳೆದುಕೊಳ್ಳುತ್ತಾರೆ ಎಂದರು.
ಮತಾಂತರಗೊಂಡು ನಮ್ಮ ಮೀಸಲಾತಿಯನ್ನು ಪಡೆಯುವುದು ಸಂವಿಧಾನ ವಿರೋಧಿ. ಈ ರೀತಿ ಮೀಸಲಾತಿಯನ್ನು ಪಡೆಯಬಾರದು ಎಂದು ನಮ್ಮ ಹೋರಾಟ. ಬುಡಕಟ್ಟು ಜನಾಂಗದ ಸಂಸ್ಕೃತಿ, ಸಂಪ್ರದಾಯ ಉಳಿಯಬೇಕು ಎಂದು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.