ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ(Dharwad district) ಅತಿವೃಷ್ಠಿಯಿಂದ 7329 ಹೆಕ್ಟೇರ್ ಕೃಷಿ ಬೆಳೆ, 2250 ಹೆಕ್ಟೇರ್ ತೋಟಗಾರಿಕೆ ಬೆಳೆ, ಒಟ್ಟು 9579 ಹೆಕ್ಟರ್ ಬೆಳೆ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್(DC Nithesh Patil) ಹೇಳಿದರು. ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ನಲ್ಲಿ ಅತಿವೃಷ್ಠಿ(Heavy rain) ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಪ್ರಾಥಮಿಕ ಮಾಹಿತಿಯಂತೆ ಭತ್ತ, ಕಡಲೆ, ಮೆಣಸಿಕಾಯಿ ಬೆಳೆಗೆ ಹಾನಿಯಾಗಿದೆ. 28 ಕಿ.ಮೀ. ಲೋಕೋಪಯೋಗಿ ರಸ್ತೆ ಹಾಳಾಗಿದೆ. 22 ಮನೆಗಳು ಸಂಪೂರ್ಣವಾಗಿ ಬಿದ್ದಿವೆ. 188 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ.
ನವೆಂಬರ್ 30ರವರೆಗೆ ಹಾನಿಗೊಳಗಾದ ಮನೆ ಹಾಗೂ ಬೆಳೆ ಪರಿಹಾರದ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಬಿದ್ದರೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು. ಹಾನಿಗೆ ಒಳಗಾದ ಮನೆಗಳ ಮಾಲೀಕರಿಗೆ ತಕ್ಷಣಕ್ಕೆ 10 ಸಾವಿರ ಪರಿಹಾರ ನೀಡಲಾಗುವುದು.

ಬೆಳೆ ವಿಮೆ ಪರಿಹಾರ ನೀಡುವ ಕಂಪನಿಯವರು ರೈತ ಸಂಪರ್ಕ ಕೇಂದ್ರದಲ್ಲಿದ್ದಾರೆ. ರೈತರಿಂದ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಇನ್ನೂ ಮೂರು ನಾಲ್ಕು ದಿನ ಮಳೆ ಮುಂದುವರಿಯಲಿದೆ. ಸದ್ಯ ಶಾಲೆಗಳಿಗೆ ಸೋಮವಾರದವರೆಗೆ ರಜೆ ಇದ್ದು, ಪರಿಸ್ಥಿತಿ ಅವಲೋಕಿಸಿ ಶಾಲೆಗೆ ರಜೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.