ದಾವಣಗೆರೆ : ನಗರದ ಅಶೋಕ್ ಟಾಕೀಸ್ ಬಳಿಯ ರೈಲ್ವೆ ಗೇಟ್ಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಅಂಡರ್ ಬ್ರಿಡ್ಜ್ ಅಥವಾ ಓವರ್ ಬ್ರಿಡ್ಜ್ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದು ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಸಿ ಅಂಗಡಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರೈಲ್ವೆ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಶೋಕ್ ಟಾಕೀಸ್ ಬಳಿ ಇರುವ ರೈಲ್ವೆ ಗೇಟ್ ಬಳಿ ಸಾರ್ವಜನಿಕರು ಸೇರಿದಂತೆ ಓಡಾಟಕ್ಕೆ ಅನೇಕ ವರ್ಷಗಳಿಂದ ಸಮಸ್ಯೆ ಉಂಟಾಗುತ್ತಿದೆ. ಶೀಘ್ರದಲ್ಲಿಯೇ ಎರಡು ಕಡೆ ವೆಂಟ್ಗಳ(ಅಂಡರ್ಬ್ರಿಡ್ಜ್) ಕಾಮಗಾರಿ ಆರಂಭಿಸಲಾಗುವುದು. ಪ್ರಸ್ತುತ ರೈಲ್ವೆ ಗೇಟ್ ಬಳಿ ಮತ್ತು ಪುಷ್ಪಾಂಜಲಿ ಟಾಕೀಸ್ ಬಳಿ ಲಾರಿಗಳನ್ನು ನಿಲ್ಲಿಸುವ ಜಾಗದಲ್ಲಿ ಒಂದು, ಒಟ್ಟು ಎರಡು ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಿಸಲಾಗುವುದು. ಈ ವೆಂಟ್ಗಳಿಂದ ದೊಡ್ಡ ದೊಡ್ಡ ವಾಹನಗಳೂ ಓಡಾಡುವ ರೀತಿ ಯೋಜನೆ ಸಿದ್ಧಪಡಿಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು.
ಮುಂಬೈ ಕೋಲ್ಕತ್ತಾವರೆಗೆ ರಫ್ತು ಮತ್ತು ಆಮದು ಮಾಡಿಕೊಳ್ಳಲು ಒಂದು ಡೆಡಿಕೇಟೆಡ್ ಟ್ರೈನ್ ಬಿಡಲಾಗಿದ್ದು, ಇದೇ ರೀತಿಯ ರೈಲನ್ನು ರಾಜ್ಯದ ಅಂಕೋಲ-ಹುಬ್ಬಳಿಯಲ್ಲಿ ಓಡಿಸಲು ಪ್ರಸ್ತಾವನೆ ಆಗಿದೆ. ಆದರೆ, ಈ ರೈಲಿನ ಕುರಿತಾಗಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಇತ್ಯರ್ಥವಾದ ಬಳಿಕ ಆದಷ್ಟು ಶೀಘ್ರದಲ್ಲಿ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.