ದಾವಣಗೆರೆ : ನೀವು ಕರ್ನಾಟಕದಲ್ಲಿದ್ದು ಕನ್ನಡದಲ್ಲಿ ಯಾಕೆ ಮಾತಾಡಲ್ಲ. ಕನ್ನಡದಲ್ಲಿ ಮಾತ್ನಾಡ್ರೀ. ಇಲ್ಲೇ ಇದ್ದು, ಇಲ್ಲೇ ಜೀವನ ಮಾಡ್ತಿದ್ರೂ ಏಕೆ ಕನ್ನಡದಲ್ಲಿ ಮಾತ್ನಾಡಲ್ಲ ಎಂದು ದಾವಣಗೆರೆ ತಹಶೀಲ್ದಾರ್ ಹಿಂದಿಯಲ್ಲಿ ಮಾತ್ನಾಡ್ತಿದ್ದ ಬೈಕ್ ಸವಾರನಿಗೆ ಪಾಠ ಮಾಡಿದರು.
ದಾವಣಗೆರೆ ನಗರದ ಕೆಆರ್ ಮಾರುಕಟ್ಟೆ ಬಳಿಯ ಎಂಜಿ ರಸ್ತೆಯಲ್ಲಿ ಈ ಘಟನೆ ಕಂಡು ಬಂತು. ಎಂಜಿ ರಸ್ತೆಯಲ್ಲಿ ಅನಾವಶ್ಯಕವಾಗಿ ಬೀದಿಗಿಳಿಯುತ್ತಿದ್ದ ವಾಹನ ಸವಾರರಿಗೆ ಸ್ವತಃ ತಹಶೀಲ್ದಾರ್ ಗಿರೀಶ್ ವಾಹನಗಳನ್ನು ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದರು.
ಈ ವೇಳೆ ಬೈಕ್ ಸವಾರ ಹಿಂದಿಯಲ್ಲಿ ಮಾತನಾಡಿದನು. ಆಗ ನೀವು ಕನ್ನಡದಲ್ಲೇ ಮಾತನಾಡ್ಬೇಕೆಂದು ಬೈಕ್ ಸವಾರನಿಗೆ ತಹಶೀಲ್ದಾರ್ ಪಾಠ ಮಾಡಿದರು.
ಬೀದಿ ಬೀದಿ ಅಲೆಯುತ್ತಿದ್ದ ಕೆಲ ಜನರನ್ನು ಗದರಿಸಿದ ತಹಶೀಲ್ದಾರ್ ಮನೆಯಲ್ಲೇ ಇರುವಂತೆ ಮನವಿ ಮಾಡಿದರು. ಬಾಣಂತಿ ತನ್ನ ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದನ್ನು ಗಮನಿಸಿದ ತಹಶೀಲ್ದಾರ್ ಗಿರೀಶ್, ತಮ್ಮ ಸರ್ಕಾರಿ ವಾಹನದಲ್ಲಿ ಮನೆಗೆ ಡ್ರಾಪ್ ಮಾಡಿಸಿದರು. ಈ ರೀತಿಯ ಸಮಾಜಮುಖಿ ಕೆಲಸಕ್ಕೆ ತಹಶೀಲ್ದಾರ್ ಗಿರೀಶ್ ಪರ ಪ್ರಶಂಸೆ ವ್ಯಕ್ತವಾಗುತ್ತಿದೆ.