ದಾವಣಗೆರೆ : ಕೋವಿಡ್ ಉಲ್ಬಣ ಹಿನ್ನೆಲೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ನಗರದ ಹೊರವಲಯದ ರಾಮನಗರದ ಬಳಿಯ ಸರ್.ಎಂ.ವಿ ಪದವಿ ಪೂರ್ವ ಕಾಲೇಜಿನಲ್ಲಿ ಎಂದಿನಂತೆ ತರಗತಿಗಳನ್ನು ನಡೆಸುವ ಮೂಲಕ ಆಡಳಿತ ಮಂಡಳಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದೆ.
ತರಗತಿ ನಡೆಯುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತರಗತಿ ನಡೆಸುತ್ತಿರುವ ಬಗ್ಗೆ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆಡಳಿತ ಮಂಡಳಿಯವರು ಯಾವುದೇ ತರಗತಿಗಳನ್ನು ನಡೆಸಲಾಗುತ್ತಿಲ್ಲ ಎಂದು ಉತ್ತರಿಸಿದ್ದಾರೆ. ಈ ವೇಳೆ, ವ್ಯಾಸಂಗ ಮಾಡುತ್ತಿದ್ದ ಮಕ್ಕಳನ್ನು ಕರೆದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ತರಗತಿಗಳು ನಡೆಯುತ್ತಿಲ್ಲ, ನಾವೇ ತರಗತಿಗಳಿಗೆ ತೆರಳಿ ರಿವಿಜನ್ ಮಾಡಿ ಕೊಳ್ಳುತ್ತಿದ್ದೇವೆ. ಅದಕ್ಕೆ ಶಿಕ್ಷಕರು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಓದಿ : ರಂಝಾನ್ ಸಭೆ ಬಳಿಕ ಕೊಗನೊಳ್ಳಿ ಚೆಕ್ಪೋಸ್ಟ್ಗೆ ಎಡಿಜಿಪಿ ಭಾಸ್ಕರ್ ರಾವ್ ಭೇಟಿ
ಈ ತಿಂಗಳ 27 ಕ್ಕೆ ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರಾಕ್ಟಿಕಲ್ ಪರೀಕ್ಷೆ ಇರುವುದರಿಂದ ಮಕ್ಕಳಿಗೆ ತರಗತಿ ನಡೆಸದೆ ಹಾಸ್ಟೆಲ್ನಲ್ಲೇ ಇರಲು ಅವಕಾಶ ಕಲ್ಪಿಸಿ ಎಂದು ಸರ್ಕಾರದಿಂದ ಸುತ್ತೋಲೆ ಬಂದಿದೆ. ಅದರ ಪ್ರಕಾರ ಮಕ್ಕಳು ವಸತಿ ನಿಲಯದಲ್ಲಿದ್ದು, ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗುವಂತೆ ಅವಕಾಶ ಕಲ್ಪಿಸಿ ಎಂದು ಸರ್. ಎಂ. ವಿ ಕಾಲೇಜಿನ ಆಡಳಿತ ಮಂಡಳಿಗೆ ತಿಳಿಸಿದ್ದೇನೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.