ದಾವಣಗೆರೆ: ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರವಾಹ, ಬರ, ಕೊರೊನಾ ಎದುರಾದವು ಎಂದು ಡಿಸಿಎಂ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಬರ, ಪ್ರವಾಹ, ಕೊರೊನಾ ಎಂಬ ಸಂಕಷ್ಟದ ನಡುವೆಯೂ ಸಿಎಂ ಯಡಿಯೂರಪ್ಪ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 2019-20 ರಲ್ಲಿ ಮಳೆ ಹೆಚ್ಚಾದ್ದರಿಂದ 35 ಸಾವಿರ ಕೋಟಿಯಷ್ಟು ಹಾನಿಯಾಗಿದ್ದು, ರಸ್ತೆ, ಸೇತುವೆ, ಕಟ್ಟಡ ಹಾನಿಯಾಗಿದೆ. ಈ ವರ್ಷದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದಂತಹ ರಸ್ತೆ, ಸೇತುವೆ, ಕಟ್ಟಡಗಳ ಹಾನಿಯಿಂದ ಮೂರುವರೆ ಸಾವಿರ ಕೋಟಿಯಷ್ಟು ನಷ್ಟ ಆಗಿದೆ ಎಂದರು.
ಓದಿ: 70 ಸಾವಿರ ಗಡಿಯಿಂದಿಳಿದ ಬೆಳ್ಳಿ: ಚಿನ್ನದ ಬೆಲೆಯಲ್ಲೂ ಭಾರಿ ಕುಸಿತ
ಕಳೆದ ವರ್ಷ 28 ಸಾವಿರ ಕೋಟಿಯಷ್ಟು ರೈತರ ಬೆಳೆ, ಮನೆಗಳು ಹಾಗು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಕೇಂದ್ರ ಸರ್ಕಾರ ಎನ್ಡಿಆರ್ಎಫ್ ನಿಯಮಾನುಸಾರ 1652 ಕೋಟಿ ಪರಿಹಾರವನ್ನು 2019 -20 ರಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ವರ್ಷ 25 ಸಾವಿರ ಕೋಟಿಯಷ್ಟು ಹಾನಿಯಾಗಿದ್ದು, ಮೊದಲನೆ ಕಂತಿನಲ್ಲಿ 577 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕೇಂದ್ರ ತಂಡವೊಂದು ಆಗಮಿಸಿ ಮಳೆಯಿಂದಾಗಿರುವ ಹಾನಿಯನ್ನು ಸರ್ವೇ ಮಾಡಿಕೊಂಡು ಹೋಗಿದ್ದಾರೆ ಎಂದರು.