ಹರಿಹರ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಘಟನೆ (ಎಐಯುಟಿಸಿ)ಯ ಆದೇಶದ ಮೇರೆಗೆ ಆಶಾ ಕಾರ್ಯಕರ್ತೆಯರು ಶಾಸಕ ಎಸ್ ರಾಮಪ್ಪ ಹಾಗೂ ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹಳ್ಳದಕೇರಿಯಲ್ಲಿರುವ ಶಾಸಕ ಎಸ್ ರಾಮಪ್ಪ ಅವರ ನಿವಾಸಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಹಾಗೂ ಮುಖಂಡರು ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಮುಖಂಡರು, ಕಳೆದ ನಾಲ್ಕೈದು ತಿಂಗಳಿಂದ ರಾಜ್ಯಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಹಗಲಿರುಳು ಎನ್ನದೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.
ಕೇವಲ ಅವರಿಗೆ ಚಪ್ಪಾಳೆ, ಹೂಮಳೆ, ಗೌರವ ಸಾಕು ಎಂದುಕೊಂಡಿರುವ ಸರ್ಕಾರವು ಆಶಾ ಕಾರ್ಯಕರ್ತೆಯರ ಸುಭದ್ರ ಜೀವನ ನಡೆಸಲು ನಡೆಸಲು ಸೂಕ್ತ ಗೌರವ ಧನ ನೀಡಬೇಕೆಂದು ಒತ್ತಾಯಿಸಿದರು. ಸರ್ಕಾರ ಕನಿಷ್ಠ ₹12 ಸಾವಿರ ಗೌರವ ಧನ ನಿಗದಿ ಮಾಡಬೇಕು. ಕೋವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೇದಾವತಿ, ಯಶೋದಾ, ರೇಣುಕಾ .ಕೆ, ಜಯಶೀಲಾ, ಹೊನ್ನಮ್ಮ, ಲಕ್ಷ್ಮಿ ಎನ್, ಶಾಂತಾ, ಉಮಾದೇವಿ ಹಾಗೂ ಶೃತಿ ಮತ್ತಿತರರಿದ್ದರು.