ಮಂಗಳೂರು: ಚಂದ್ರಯಾನ ಸಫಲವಾಗಲು ಬರೀ ವಿಜ್ಞಾನಿಗಳ ಪ್ರಯತ್ನ ಮಾತ್ರ ಕಾರಣವಲ್ಲ, ರಾಜಕೀಯ ವ್ಯಕ್ತಿಗಳ ನೆರವೂ ಅಷ್ಟೇ ಮುಖ್ಯವಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದರು.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ 'ಬಾಹ್ಯಾಕಾಶ ಮತ್ತು ಅದಕ್ಕೂ ಮೀರಿ' ಎಂಬ ವಿಷಯದ ಬಗ್ಗೆ ಮಾತನಾಡಿ, ಚಂದ್ರಯಾನ-1 ಸಫಲವಾಗಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆರವೇ ಕಾರಣ ಎಂದು ಹೇಳಿದರು.
ನಾವು ಮಾಡಿರುವ ಕಾರ್ಯ ಸದುದ್ದೇಶದಿಂದ ಕೂಡಿದ್ದರೆ ಅದರ ಹಿಂದೆ ಇಡೀ ದೇಶವೇ ಇರುತ್ತದೆ. ಚಂದ್ರನ ಬಗ್ಗೆ ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿರದ ಕಾರಣ ಇಸ್ರೋ ಚಂದ್ರನ ಬಗ್ಗೆ ಸಂಶೋಧನೆ ಮಾಡಲು ಚಂದ್ರಯಾನ-1 ನ್ನು ಆರಂಭಿಸಿತು. ಸೌರ ಮಂಡಲದ ಇತರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುವ ಮೊದಲು ಮೂಲ ಮಾಹಿತಿ ತಿಳಿಯುವ ಅಗತ್ಯವಿದೆ ಎಂಬ ಕಾರಣಕ್ಕೆ ಇಸ್ರೋ ಚಂದ್ರಯಾನವನ್ನು ಮೊದಲಿಗೆ ಆಯ್ಕೆ ಮಾಡಿತ್ತು. ಚಂದ್ರಯಾನ-1ರಲ್ಲಿ ಚಂದ್ರನ ಮೇಲೆ ನೀರು ಇದೆ ಎಂಬ ಮಹತ್ತರವಾದ ಮಾಹಿತಿ ಲಭ್ಯವಾಗಿದೆ. ಇದರ ಯಶಸ್ಸಿನ ಬಳಿಕ ನಾವು ಮಂಗಳಯಾನವನ್ನು ಕೈಗೊಂಡಿದ್ದೆವು. ಮೊದಲ ಬಾರಿಯಲ್ಲಿಯೇ ಮಂಗಳಯಾನ ನಡೆಸಿ ಮಹತ್ತರವಾದ ಯಶಸ್ಸು ಸಾಧಿಸಿದ್ದೆವು ಎಂದರು.