ಪುತ್ತೂರು: ಸಾಹಿತ್ಯ ಸಾಂಸ್ಕೃತಿಕ ಗುರುವಾಗಿರುವ ಡಾ. ಶಿವರಾಮ ಕಾರಂತರು ಮತ್ತು ಆಧ್ಯಾತ್ಮಿಕ ಗುರುವಾದ ಸ್ವಾಮಿ ವಿವೇಕಾನಂದರು ಆದರ್ಶ ಮೆರೆದ ದಿಗ್ಗಜರು. ಅವರ ಆಶಯಗಳು ಯುವ ಜನತೆಗೆ ಸದಾ ದಾರಿದೀಪ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕರ್ನಾಟಕ ಯುವ ಸಂಘಗಳ ಒಕ್ಕೂಟದ ವತಿಯಿಂದ ಪುತ್ತೂರು ಬಾಲವನದಲ್ಲಿ ನಡೆದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಶಿವರಾಮ ಕಾರಂತರು ಪ್ರಕೃತಿಯ ಜೊತೆಗಿನ ಬದುಕನ್ನು ಅನಾವರಣಗೊಳಿಸಿ, ಅದರಲ್ಲಿ ಬದುಕುವ ಚಿಂತನೆಯನ್ನು ಹುಟ್ಟುಹಾಕಿದವರು. ಸಾಹಿತ್ಯ, ಸಾಂಸ್ಕೃತಿಕವಾಗಿ ಪರಿಸರವನ್ನು ಕಟ್ಟಿ ಬೆಳೆಸುವ ಮೂಲಕ ನಮ್ಮ ಬದುಕನ್ನು ಚೈತನ್ಯಮಯಗೊಳಿಸುವ ಪ್ರಯತ್ನ ನಡೆಸಿದರು. ಬಾಲವನದಂತಹ ಪ್ರಕೃತಿದತ್ತ ತಾಣವನ್ನು ನಿರ್ಮಿಸಿ ಆಹ್ಲಾದಕರ ಮನೋಭೂಮಿಕೆಗೆ ಅರ್ಥ ಕಂಡುಕೊಂಡವರು. ಸ್ವಾಮಿ ವಿವೇಕಾನಂದ ಅವರು ತಮ್ಮ ಚಿಕ್ಕ ಪ್ರಾಯದಲ್ಲಿಯೇ ಜಗತ್ತನ್ನು ನೋಡುವ ದೃಷ್ಟಿಕೋನವನ್ನು ನಾಡಿಗೆ ನೀಡಿದರು. ಈ ದಿಗ್ಗಜರ ಸದಾಶಯ ನಮ್ಮ ಬದುಕಿಗೆ ಅರ್ಥಪೂರ್ಣ ಚಿಂತನೆ ನೀಡಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ತಾಪಂ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಉಪ ವಿಭಾಗಾಧಿಕಾರಿ ಮತ್ತು ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಯತೀಶ್ ಉಳ್ಳಾಲ್ ವಹಿಸಿದ್ದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯದ 30 ಜಿಲ್ಲೆಗಳ 30 ಯುವಕ-ಯುವತಿಯರಿಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಲ್ಕು ಯುವಕ ಮಂಡಲಗಳಿಗೆ ಸಾಂಘಿಕ ಪ್ರಶಸ್ತಿ ನೀಡಲಾಯಿತು. ಯೋಗಪಟು ಪ್ರಣಮ್ಯ ಅಗಳಿ ಮತ್ತು ಯುವ ಚಿತ್ರ ಕಲಾವಿದ ರಜತ್ ರೈ, ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಬಾಲವನ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ಅವರನ್ನು ಗೌರವಿಸಲಾಯಿತು.