ಸುಳ್ಯ: ಕಳೆದ ಹಲವು ತಿಂಗಳುಗಳಿಂದ ಸಂಚಲನ ಮೂಡಿಸಿದ್ದ ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ಪ್ರಕರಣ ಸಂಧಾನಕಾರರ ಸಭೆಯಲ್ಲಿ ಪರಿಹಾರ ಸಿಗದ ಕಾರಣ, ಮತ್ತೊಮ್ಮೆ ಗಾಂಧಿನಗರ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಧರಣಿ ಕುಳಿತ ಘಟನೆ ನಡೆದಿದೆ.
![Suliah Asia case Muslim leaders meeting failure news](https://etvbharatimages.akamaized.net/etvbharat/prod-images/kn-dk-04-protest-av-pho-kac10008_09122020213555_0912f_1607529955_802.jpg)
ಈ ಪ್ರಕರಣವನ್ನು ಶಮನಗೊಳಿಸಲು ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 1 ರಂದು ಸಭೆ ಸೇರಲಾಗಿತ್ತು. ಖಲೀಲ್ ತಂದೆ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ, ಡಿಸೆಂಬರ್ 9 ರಂದು ಖಲೀಲ್ ನನ್ನು ಸುಳ್ಯದ ಸಂಧಾನ ಸಭೆಗೆ ಕರೆತರುವಂತೆ ಅವರ ತಂದೆಗೆ ಹೇಳಲಾಗಿತ್ತು.
ಓದಿ: ಗಂಡನನ್ನು ಹುಡುಕಿ ಕೊಡಿ: ಮತಾಂತರಗೊಂಡ ಆಸಿಯಾ ಅಳಲು
ಆದರೆ ಸಭೆಗೆ ಖಲೀಲ್ ಬಾರದ ಕಾರಣ ಅಂತಿಮ ನಿರ್ಣಯ ತೆಗೆದುಕೊಂಡು ಪ್ರಕರಣಕ್ಕೆ ಸುಖಾಂತ್ಯಗೊಳಿಸಲು ಮುಸ್ಲಿಂ ಮುಖಂಡರಿಗೆ ಸಾಧ್ಯವಾಗಲಿಲ್ಲ. ನಂತರ ಮುಖಂಡರು ಮತ್ತು ಆಸಿಯಾ ಸುಳ್ಯ ವೃತ್ತ ನಿರೀಕ್ಷಕರ ಕಛೇರಿಗೆ ತೆರಳಿ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಸಮಿತಿ, ಈ ಘಟನೆಯನ್ನು ಸುಖಾಂತ್ಯಗೊಳಿಸಲು ಹಲವಾರು ಬಾರಿ ಪ್ರಯತ್ನಿಸಿದ್ದರು. ಖಲೀಲ್ ಮತ್ತು ಅವರ ತಂದೆ ಹಾಗೂ ಸಹೋದರ ಇದಕ್ಕೆ ಸ್ಪಂದನೆ ನೀಡದ ಕಾರಣ ಪ್ರಕರಣವನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಅನಾಹುತಗಳು ಸಂಭವಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ತಮ್ಮ ವತಿಯಿಂದ ಹೇಳಿಕಾ ಪತ್ರವನ್ನು ನೀಡಿದ್ದಾರೆ. ಆಸಿಯಾರನ್ನು ಗಾಂಧಿನಗರದ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಬಿಟ್ಟು ಹೋಗಿದ್ದಾರೆೆ. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆಸಿಯಾ ಅಂಗಡಿ ಮುಂದೆ ಧರಣಿ ಮಾಡಿದ್ದಾರೆ ಎನ್ನಲಾಗಿದೆ.