ಮಂಗಳೂರು: ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಉದ್ಯಮಗಳು ಹಂತ ಹಂತವಾಗಿ ಆರಂಭವಾಗುತ್ತಿದ್ದು, ಕಾರ್ಮಿಕರು ಕೆಲಸ ನಿರ್ವಹಿಸುವ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೋಡಂಬಿ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಅನ್ಲಾಕ್ ಬಳಿಕ ಗೋಡಂಬಿ ಉತ್ಪಾದನಾ ಘಟಕ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ವಿಶೇಷ ವರದಿ ಇಲ್ಲಿದೆ.
ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಗೋಡಂಬಿ ಉದ್ಯಮವು ಸಂಪೂರ್ಣ ಸ್ಥಗಿತಗೊಂಡಿದ್ದು, 40-45 ಸಾವಿರ ಮಹಿಳಾ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಮೇ ಅಂತ್ಯದೊಳಗೆ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಆಹಾರ ಉದ್ಯಮಗಳಿಗೆ ಅವಕಾಶ ನೀಡಿತು. ಇದರಿಂದ ಗೋಡಂಬಿ ಉದ್ಯಮವೂ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತು. ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ.70ರಷ್ಟು ಗೋಡಂಬಿ ಉದ್ಯಮದಲ್ಲಿ ಚೇತರಿಕೆ ಕಂಡು ಬಂದಿದೆ.
ಕೋವಿಡ್-19 ಸೋಂಕಿನ ಈ ಕಾಲಘಟ್ಟದಲ್ಲಿ ಆಹಾರ ಉದ್ಯಮದಲ್ಲಿ ಸ್ವಚ್ಛತೆ ಅತ್ಯಗತ್ಯವಿದ್ದು, ಎಲ್ಲಾ ರೀತಿಯ ಸುರಕ್ಷತೆಯನ್ನು ಅಳವಡಿಸಿಕೊಂಡು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸೋಂಕು ಹರಡದಂತೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದ್ದು, ಎಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ಒಳ ಬಿಡಲಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸಲಾಗುತ್ತದೆ.
ನಗರದ ಬೈಕಂಪಾಡಿಯಲ್ಲಿರುವ ಕಲ್ಬಾವಿ ಗೇರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಐಐ ಅಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿ, ಗೋಡಂಬಿ ಉದ್ಯಮದಲ್ಲಿ ಭಾರತ ಇಂದು ವಿಯೆಟ್ನಾಂ ಜೊತೆಗೆ ಪೈಪೋಟಿ ನಡೆಸುತ್ತಿದೆ. ಗೇರುಬೀಜ ಕಾರ್ಖಾನೆಯಲ್ಲಿ ಗೋಡಂಬಿ ಉತ್ಪಾದನಾ ಪ್ರಕ್ರಿಯೆಯ ಸಂದರ್ಭ ಶೇ.30-55 ತುಂಡು ಗೋಡಂಬಿ ದೊರೆಯುತ್ತದೆ. ಈ ತುಂಡು ಗೋಡಂಬಿಗಳಿಗೆ ನಮ್ಮ ದೇಶದಲ್ಲಿ ಬಹಳಷ್ಟು ಬೇಡಿಕೆ ಇದೆ. ಬೇಕರಿ ಆಹಾರ ವಸ್ತುಗಳಲ್ಲಿ, ಕೇಟರಿಂಗ್, ಹೋಟೆಲ್ಗಳಲ್ಲಿ ಇವುಗಳನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಆದ್ದರಿಂದ ತುಂಡು ಗೋಡಂಬಿಗಳಿಗೆ ಒಳ್ಳೆಯ ದರ ಇರುವುದರಿಂದ ನಾವು ವಿಯೆಟ್ನಾಂ ಜೊತೆಗೆ ಪೈಪೋಟಿ ಮಾಡಲು ಅನುಕೂಲತೆ ಇದೆ.
ಆದರೆ ಲಾಲ್ ಡೌನ್ನಿಂದ ಬೇಕರಿ, ಹೋಟೆಲ್ ಹಾಗೂ ಕೇಟರಿಂಗ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ತುಂಡು ಗೇರು ಬೀಜಗಳಿಗೆ ಏಕಾಏಕಿ ಬೇಡಿಕೆ ಕುಸಿಯಿತು. ಉತ್ಪಾದನಾ ಪ್ರಕ್ರಿಯೆ ನಡೆಯುತ್ತಿದ್ದರೂ ನಾವು ಅದನ್ನು ಸಂಗ್ರಹಿಸುವಂತೆ ಇರಲಿಲ್ಲ. ಅನ್ಲಾಕ್ ಪ್ರಕ್ರಿಯೆ ಬಳಿಕ ಹೋಟೆಲ್, ಬೇಕರಿ, ಕೇಟರಿಂಗ್ ಎಲ್ಲವೂ ಹಂತ ಹಂತವಾಗಿ ತೆರೆಯಲು ಆರಂಭವಾಗುತ್ತಿರುವಂತೆ ವಹಿವಾಟಿನಲ್ಲೂ ಸುಧಾರಣೆ ಕಂಡಿದೆ. ಇದರಿಂದ ಮುಂದಿನ ತಿಂಗಳೊಳಗೆ ಗೋಡಂಬಿ ಉದ್ಯಮ ಸಂಪೂರ್ಣವಾಗಿ ಮುಂಚಿನ ಪರಿಸ್ಥಿತಿಗೆ ಮರಳಲಿದೆ ಎಂದರು.
ಎಲ್ಲಾ ಪರಿಸ್ಥಿತಿಯಲ್ಲಿಯೂ ಗೋಡಂಬಿ ವ್ಯಾಪಾರಸ್ಥರ ಸಂಸ್ಥೆಗಳು ಸರ್ಕಾರದ ಜೊತೆಗೆ ನಿಕಟ ಸಂಪರ್ಕ ಹೊಂದಿ ಚರ್ಚೆ ಮಾಡಿದ್ದವು. ಸರ್ಕಾರವು ಕಳೆದ ಐದು ತಿಂಗಳಿನಿಂದ ನಮಗೆ ಉತ್ತಮ ರೀತಿಯಲ್ಲಿ ಉತ್ತಮವಾಗಿ ಸ್ಪಂದನೆ ನೀಡುತ್ತಿತ್ತು. ಅಲ್ಲದೆ ಲಾಕ್ ಡೌನ್ ಬಳಿಕ ಉದ್ಯಮ ಆರಂಭಿಸಿದಾಗ ನಮಗೆ ಹಣ ಬರುತ್ತಿರಲಿಲ್ಲ. ಇದರಿಂದ ಕಾರ್ಮಿಕರಿಗೆ ಸಂಬಳ ಕೊಡಲೂ ಕಷ್ಟವಾಗುತ್ತಿತ್ತು. ಈ ಸಂದರ್ಭದಲ್ಲಿಯೂ ಸರ್ಕಾರ ನಮ್ಮೊಂದಿಗಿದ್ದು, ಕೋವಿಡ್ ಸಾಲ ಒದಗಿಸಿದೆ. ಹಿಂದೆ ಉದ್ಯಮ ಸರ್ಕಾರದ ಹಿಂದೆ ಇತ್ತು. ಇಂದು ಸರ್ಕಾರ ಉದ್ಯಮಕ್ಕೆ ಬೆಂಬಲ ನೀಡುತ್ತಿದ್ದು, ಉದ್ದಿಮೆದಾರರ ಎಲ್ಲಾ ಸಂಕಷ್ಟಗಳನ್ನು ಪರಿಹರಿಸುತ್ತಿದೆ. ಅದಲ್ಲದೆ ಇಂದು ಉದ್ಯಮ ಆರಂಭಿಸಲು ಪರವಾನಿಗೆ ನೀಡಿಲ್ಲದಿದ್ದರೆ ಸರ್ಕಾರಕ್ಕೆ ಬರುವ ತೆರಿಗೆಗೂ ಕುತ್ತು ಬಂದು ಸರ್ಕಾರಕ್ಕೂ ತೊಂದರೆಯಾಗುತ್ತಿತ್ತು.
ಭಾರತ ಕಚ್ಚಾ ಗೇರುಬೀಜಗಳಿಗಾಗಿ ಪೂರ್ವ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳನ್ನು ಅವಲಂಬಿಸಿದೆ. ನಮ್ಮ ರಾಜ್ಯದಲ್ಲಿ 50-60 ಸಾವಿರ ಟನ್ ಗೇರು ಬೀಜಗಳು ಮಾತ್ರ ಉತ್ಪಾದನೆಯಾಗುತ್ತದೆ. ನಾವು ಎರಡು ಲಕ್ಷ ಟನ್ ಕಚ್ಚಾ ಗೇರುಬೀಜಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪ್ರಧಾನಿ ಮೋದಿ ಅವರು ಮಹತ್ವಾಕಾಂಕ್ಷೆಯ ಆತ್ಮನಿರ್ಭರ್ ಭಾರತವನ್ನು ಘೋಷಣೆ ಮಾಡಿದ್ದಾರೆ. ಆದ್ದರಿಂದ ರೈತರಿಗೆ ಪ್ರೋತ್ಸಾಹ ನೀಡಿ ಗೇರು ಕೃಷಿ ಲಾಭದಾಯಕ ಕೃಷಿ ಎಂದು ಭರವಸೆ ನೀಡಬೇಕು. ಇನ್ನಷ್ಟು ಗೇರು ಕೃಷಿ ಉತ್ಪನ್ನಗಳನ್ನು ಹೆಚ್ಚಿಸಬೇಕು. ಈ ಮೂಲಕ ಒಂದು ಲಕ್ಷಕ್ಕಿಂತಲೂ ಅಧಿಕ ಗೇರುಬೀಜ ಉತ್ಪಾದನೆ ಮಾಡದಿದ್ದಲ್ಲಿ ನಾವು ಆತ್ಮ ನಿರ್ಭರ್ ಆಗಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ಈ ಬಗ್ಗೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಾಗಿದೆ ಎಂದು ಪ್ರಕಾಶ್ ರಾವ್ ಅಭಿಪ್ರಾಯಪಟ್ಟರು.