ಕಡಬ: ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿ ಹಾದು ಹೋಗುವ ಕಡರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಕಿರಿದಾಗಿದ್ದು, ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಬೃಹತ್ ಸೇತುವೆ ನಿರ್ಮಾಣ ಅಥವಾ ಅಗಲೀಕರಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಗಳನ್ನು ಸಂಪರ್ಕಿಸುವ ಸುಬ್ರಹ್ಮಣ್ಯ-ಪೆರಿಯಶಾಂತಿ-ಧರ್ಮಸ್ಥಳ ರಾಜ್ಯ ಹೆದ್ದಾರಿ ಡಾಂಬರೀಕರಣಗೊಂಡು ಅಭಿವೃದ್ಧಿ ಹೊಂದಿದೆ. ಆದರೆ ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆಯ ಅಗಲ ಕಿರಿದಾಗಿದ್ದು, ತಡೆಗೋಡೆಗಳೂ ಶಿಥಿಲಾವಸ್ಥೆಯಿಂದ ಕೂಡಿವೆ. ಪ್ರಸಕ್ತ ಒಂದು ವಾಹನ ಮಾತ್ರ ಸಂಚರಿಸಲು ಸಾಧ್ಯವಾಗಿದ್ದು, ಇದು ವಾಹನ ಸವಾರರಿಗೂ, ಪಾದಚಾರಿಗಳಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಸೇತುವೆಯ ಅಗಲೀಕರಣ ಅಥವಾ ರಸ್ತೆಯ ಅಗಲಕ್ಕೆ ತಕ್ಕಂತೆ ಸೇತುವೆ ನಿರ್ಮಿಸುವ ಅಗತ್ಯವಿದೆ. ನೂಜಿಬಾಳ್ತಿಲ ಗ್ರಾ.ಪಂ. ಸಭೆಯಲ್ಲೂ ಈ ಬಗ್ಗೆ ಆಗ್ರಹ ವ್ಯಕ್ತವಾಗಿತ್ತು.

ಈ ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಮೊದಲು 30 ವರ್ಷಗಳ ಹಿಂದೆ ಪೇರಡ್ಕ ಕಾಜರಕಟ್ಟೆ ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಿಸಲಾಗಿತ್ತು. ನಂತರ
ಇಚ್ಲಂಪಾಡಿಯಲ್ಲಿ ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣಗೊಂಡು ಹೆದ್ದಾರಿ ಅಭಿವೃದ್ಧಿಯಾದ ಬಳಿಕ ಪೆರಿಯಶಾಂತಿ-ಮರ್ದಾಳ ರಸ್ತೆಯಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳ ಪುಣ್ಯ ಕ್ಷೇತ್ರಗಳಿಗೆ ಭೇಟಿಕೊಡುವ ಭಕ್ತಾದಿಗಳು ಇಲ್ಲಿಂದಲೇ ಪ್ರಯಾಣಿಸುತ್ತಿದ್ದು, ದಿನಂಪ್ರತಿ ಐನೂರಕ್ಕೂ ಅಧಿಕ ವಾಹನಗಳು, ಸುಮಾರು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಸಂಚರಿಸುತ್ತಿರುವುದರಿಂದ ವಾಹನ ದಟ್ಟನೆಯೂ ಈ ರಸ್ತೆಯಲ್ಲಿ ಹೆಚ್ಚುತ್ತಿದೆ.
ಈ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಹೊರ ರಾಜ್ಯ ಅಥವಾ ಹೊರಜಿಲ್ಲೆಗಳ ಪ್ರಯಾಣಿಕರಿಗೆ ಇಲ್ಲಿ ಕಿರಿದಾದ ಸೇತುವೆ ಇರುವುದು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ಇದರಿಂದಾಗಿ ಯಾವುದೇ ಸಮಯದಲ್ಲೂ ಅಪಾಯದ ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಈ ಕಿರಿದಾದ ಸೇತುವೆಯನ್ನು ಅಗಲೀಕರಣ ಅಥವಾ ಹೊಸ ಸೇತುವೆ ಮಾಡಿಸುವಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಧರ್ಮಸ್ಥಳ-ಮರ್ದಾಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಪೇರಡ್ಕದ ಅಗಲ ಕಿರಿದಾದ ಸೇತುವೆಯನ್ನು ಅಗಲೀಕರಣಕ್ಕೆ ಕೆ.ಆರ್.ಡಿ.ಸಿ.ಎಲ್. ಅವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಜೊತೆಗೆ ಬಿಳಿನೆಲೆ ಗ್ರಾಮದ ಕೈಕಂಬ ಕೋಟೆಹೊಳೆ ಸೇತುವೆಯನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಳ್ಯ ವಿಧಾನಸಭಾ ಶಾಸಕರಾದ ಎಸ್.ಅಂಗಾರ ಅವರೂ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂಬುದಾಗಿ ಪುತ್ತೂರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್ ಅವರು ಮಾಹಿತಿ ನೀಡಿದ್ದಾರೆ.