ಬೆಳ್ತಂಗಡಿ: ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಒಬ್ಬ ವ್ಯಕ್ತಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ನೆತ್ತರ್ ಪಲ್ಕೆಮನೆಯಲ್ಲಿ ನಡೆದಿದೆ.
![Preparation of illegal marijuana in beltangadi](https://etvbharatimages.akamaized.net/etvbharat/prod-images/kn-mng-belthangady-03-kallabattiattackarredt-photo-kac10018_17042020224852_1704f_1587143932_1090.jpg)
ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ144 ನಿಷೇಧಾಜ್ಞೆ ಜಾರಿಯಾಗಿದ್ದು, ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ. ಆದರೆ, ಈ ಗ್ರಾಮದಲ್ಲಿ ತಯಾರಿಸಲಾಗುತ್ತಿದ್ದ ಕಳ್ಳಭಟ್ಟಿಯ ಮಾಹಿತಿ ಮೇರೆಗೆ ದಾಳಿ ನಡೆಸಿ ಅಬಕಾರಿ ಪೊಲೀಸರ ತಂಡ ಪ್ರಕರಣ ದಾಖಲಿಸಿಕೊಂಡಿದೆ.
ಗ್ರಾಮದ ನಿವಾಸಿ ಎಲಿಯಸ್ ಕುವೆಲ್ಲೋ (66) ಎಂಬಾತನನ್ನು ಬಂಧಿಸಲಾಗಿದೆ. ತಾನು ವಾಸ ಇರುವ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದನು. ಸ್ಥಳದಲ್ಲಿನ ಸಲಕರಣೆಗಳೊಂದಿಗೆ 9 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿದೆ.
ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕಿ ಸೌಮ್ಯಲತಾ. ಎನ್ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಜಿಲ್ಲಾ ಅಬಕಾರಿ ಉಪ ಆಯುಕ್ತೆ ಶೈಲಜಾ.ಎ. ಕೋಟೆ ಅವರ ನಿರ್ದೇಶನದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗೀತಾ.ಪಿ ಅವರು ಮಾರ್ಗದರ್ಶನ ನೀಡಿದ್ದರು. ಬೆಳ್ತಂಗಡಿ ವಲಯ ಸಿಬ್ಬಂದಿ ಸಯ್ಯದ್ ಶಬ್ಬೀರ್, ಭೋಜ, ಅಬ್ದುಲ್ ಹಮೀದ್.ಕೆ, ಶಿವಶಂಕರಪ್ಪ, ರವಿಚಂದ್ರ ಬೂದಿಹಾಳ ಹಾಗೂ ವಾಹನ ಚಾಲಕ ನವೀನ್ ಕುಮಾರ್.ಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.