ಉಳ್ಳಾಲ(ದ.ಕ.) : ದಿನಸಿ ಸಾಮಾಗ್ರಿಗಳನ್ನು ತರುವ ಟೆಂಪೋದವರಿಗೆ ಪಂಚಾಯತ್ ಪತ್ರ ಪಡೆದು ಪೊಲೀಸ್ ಇಲಾಖೆಯಿಂದ ಪಾಸ್ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಭಾಗದಲ್ಲಿರುವ ಮಂದಿ ಗುರುತಿನ ಚೀಟಿ ತೋರಿಸಿದಲ್ಲಿ ದ್ವಿಚಕ್ರ ವಾಹನದಲ್ಲಿ ಒಂದು ಬಾರಿ ಹೋಗಿ ಬರಲು ಅವಕಾಶ ಕಲ್ಪಿಸಲಾಗುವುದು. ರಿಕ್ಷಾ ಚಾಲಕರು ತುರ್ತು ಆರೋಗ್ಯಕ್ಕಾಗಿ ಮಾತ್ರ ಆಸ್ಪತ್ರೆ ಪತ್ರ ಹಿಡಿದು ಗಡಿಭಾಗದ ರಸ್ತೆ ದಾಟಬಹುದು ಎಂದು ಶಾಸಕ ಯು ಟಿ ಖಾದರ್ ತಲಪಾಡಿ ಗಡಿಭಾಗದ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ಕೇರಳ-ಕರ್ನಾಟಕ ಗಡಿಭಾಗ ತಲಪಾಡಿ ಗ್ರಾಮಸ್ಥರು ಹಾಗೂ ಪೊಲೀಸರ ಜತೆಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಖಾದರ್, ತಲಪಾಡಿ ಗಡಿಭಾಗದ ಪ್ರದೇಶವಾಗಿರುವುದರಿಂದ ಪೊಲೀಸರು ಚೆಕ್ ಪೋಸ್ಟ್ ಒಳಗಿರುವ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಸೂಕ್ತ ದಾಖಲೆಗಳನ್ನು ನೀಡಿ ವಾಹನಗಳಲ್ಲಿ ತೆರಳಬಹುದು. ಸುಖಾಸುಮ್ಮನೆ ಸದ್ಯದ ಸ್ಥಿತಿಯಲ್ಲಿ ತಿರುಗಾಡಲು ಅಸಾಧ್ಯ. ಅಲ್ಲದೆ ಕೇರಳದವರು ಒಳಭಾಗದಿಂದ ಬರುವ ಸಂಭವ ಇರುವುದರಿಂದ ಪೊಲೀಸರು ಹಾಗೂ ಜಿಲ್ಲಾಡಳಿತದ ಆದೇಶ ಪಾಲಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ಕೋವಿಡ್-19 ಆಸ್ಪತ್ರೆಯಲ್ಲಿರುವ ವೃದ್ಧ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಈ ನಿಟ್ಟಿನಲ್ಲಿ ಜನ ಸಹಕರಿಸಬೇಕು ಎಂದರು.
ಕೇರಳದವರನ್ನು ಬಿಟ್ಟರೆ ಕೊರೊನಾ ಹರಡುವ ಸಾಧ್ಯತೆ : ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್ ಮಾತನಾಡಿ, ರಿಕ್ಷಾದಲ್ಲಿ ಕೇರಳದವರನ್ನು ಪಾಸ್ ಮಾಡಿ ಬರುವಂತಹ ಕೆಲಸಗಳಾಗುತ್ತಿವೆ. ಓರ್ವ ಕೇರಳಿಗನನ್ನು ಒಳಗಿಂದ ಬಿಟ್ಟುಕೊಟ್ಟಲ್ಲಿ ಕೊರೊನಾ ಬಿಟ್ಟುಕೊಟ್ಟಷ್ಟು ಪರಿಣಾಮ ಆಗುತ್ತದೆ. ಜಿಲ್ಲೆಯ ಸ್ಥಿತಿ ಅಪಾಯದಲ್ಲಿದೆ. 3ನೇ ಸೋಂಕಿತೆಯ ಸ್ಥಿತಿ ಚಿಂತಾಜನಕವಾಗಿದೆ. ಒಂದು ಬಾರಿ ಕೊರೊನಾ ಬಾಧಿಸಿತು ಎಂದಾದಲ್ಲಿ ಆತ ಜೀವನ ಪರ್ಯಂತ ಸಮಸ್ಯೆಗಳನ್ನು ಎದುರಿಸುತ್ತಾ ಬಾಳಬೇಕು ಎಂದರು.
ಜನ ಸುತ್ತಾಡುತ್ತಾರೆಂದಾದಲ್ಲಿ ಪೊಲೀಸರ ಅವಶ್ಯಕತೆಯೇ ಇರುವುದಿಲ್ಲ. ಕೇರಳದವರು ಬರಬಾರದು ಎಂಬ ಉದ್ದೇಶದಿಂದ ಹಾಗೂ ಸೋಂಕಿತರ ಲೆಕ್ಕ ಸಿಗದಷ್ಟು ಕಷ್ಟವಾಗಬಹುದು ಅನ್ನೋ ಉದ್ದೇಶದಿಂದ ಗಡಿಭಾಗದಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಪಹರೆ ನಡೆಸುತ್ತಿದ್ದಾರೆ ಎಂದರು. ಈ ವೇಳೆ ಉಳ್ಳಾಲ ಠಾಣಾಧಿಕಾರಿ ಅನಿಲ್ಕುಮಾರ್, ತಲಪಾಡಿ ಗ್ರಾಪಂ ಸದಸ್ಯರುಗಳಾದ ವೈಭವ್ ಶೆಟ್ಟಿ, ವಿನಯ್ ಶೆಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.