ಮಂಗಳೂರು: ನಗರದ ಕಟೀಲು ಸಮೀಪದ ಬಡಗ ಎಕ್ಕಾರು ದೇವರಗುಡ್ಡೆಯಲ್ಲಿ ನಡೆದ ತಲ್ವಾರ್ ದಾಳಿಯಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ದಸ್ತಗಿರಿ ಮಾಡಲಾಗಿದೆ.
ದೀಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್,ಮೋಕ್ಷಿತ್, ಧನರಾಜ್ ಎಂಬವರು ದಸ್ತಗಿರಿಯಾದವರು. ಕ್ಷುಲ್ಲಕ ವಿಚಾರಕ್ಕೆ ಎರಡು ತಂಡಗಳ ಮಧ್ಯೆ ಮೇ 31 ರಂದು ರಾತ್ರಿ 7.45ರ ಸುಮಾರಿಗೆ ಬಡಗ ಎಕ್ಕಾರು ದೇವರಗುಡ್ಡೆಯಲ್ಲಿ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತೆರಳಿ ದೊಣ್ಣೆ, ಕಬ್ಬಿಣದ ಸರಳು, ಚೂರಿಯಿಂದ ಹಲ್ಲೆಗೈದ ಪರಿಣಾಮ ಮಂಗಳೂರಿನ ಮರಕಡ ನಿವಾಸಿ ಕೀರ್ತನ್(20) ಎಂಬ ಯುವಕ ಮೃತಪಟ್ಟಿದ್ದನು. ಅಲ್ಲದೇ ನಿತಿನ್ (20), ಮನೀಶ್ (20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಭೇದಿಸಿದ ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹದಳದವರು ಹಾಗೂ ಬಜಪೆ ಪೊಲೀಸರು ಐವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿರುವ ಮಾರಕಾಯುಧ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.