ಮಂಗಳೂರು : ಲಿಟರೆಸಿ ಫೌಂಡೇಶನ್ ಆಶ್ರಯದಲ್ಲಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಲಿಟ್ ಫೆಸ್ಟ್ ಗೆ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಚಂದ್ರಶೇಖರ ಕಂಬಾರರು, ದೇಶದ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮುರಿಯಲು ಮೆಕಾಲೆ ದೇಶದಲ್ಲಿ ಇಂಗ್ಲೀಷ್ ಭಾಷೆಯ ಶಿಕ್ಷಣ ನೀಡಿದರು. 1835 ರಲ್ಲಿ ಮೆಕಾಲೆ ಮಾಡಿದ ಈ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು ಎಂದು ಅಭಿಪ್ರಾಯಪಟ್ಟರು.
ಬ್ರಿಟಿಷರಿಗೆ ಭಾರತವನ್ನು ಗೆಲ್ಲಲು ಈ ದೇಶದ ಆಧ್ಯಾತ್ಮಿಕತೆ, ಸಂಸ್ಕೃತಿಯನ್ನು ಮುರಿಯಬೇಕಾಗಿತ್ತು. ಅದಕ್ಕಾಗಿ ಇಂಗ್ಲಿಷ್ ಶಿಕ್ಷಣ ಕಡ್ಡಾಯ ಮಾಡಲಾಯಿತು. ಇಂಗ್ಲೀಷ್ ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂದರೆ ಈಗ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸಲು ಇನ್ನೂ ಸಾಧ್ಯವಾಗಿಲ್ಲ. ಇಂಗ್ಲೀಷ್ ಗುಲಾಮಗಿರಿ ಎಷ್ಟು ಬೇರೂರಿದೆ ಎಂಬುದು ಇದರಲ್ಲಿ ಗೊತ್ತಾಗಲಿದೆ. ನಮ್ಮತನ ಕಂಡುಕೊಳ್ಳಬೇಕಾದ ಅಗತ್ಯ ಇಂದು ವಿಪರೀತ ಇದೆ. ಇ-ಲಿಟರೇಚರ್ ಸುಧಾರಣೆ ಆಗಬೇಕಾಗಿದೆ ಎಂದರು.