ಉಳ್ಳಾಲ(ಮಂಗಳೂರು) : ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಶನಿವಾರ ಸಮಾಪ್ತಿಗೊಂಡಿದ್ದು, ಕೇರಳದಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ ಪರೀಕ್ಷೆಯನ್ನು ಮುಗಿಸಿ ತಲಪಾಡಿ ಗಡಿ ಮೂಲಕ ಕೇರಳಕ್ಕೆ ತೆರಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾಡಳಿತದೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಕೇರಳದ ಕೆಎಸ್ಆರ್ ಟಿಸಿಯ 11 ಬಸ್ಗಳಲ್ಲಿ ತಲಪಾಡಿ ಗಡಿ ಪ್ರದೇಶದವರೆಗೆ ವಿದ್ಯಾರ್ಥಿಗಳನ್ನು ಕರೆತಂದು ಅಲ್ಲಿಂದ ತಲಪಾಡಿ ಪೊಲೀಸ್ ಚೆಕ್ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ಮಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬಿಡಲಾಗಿತ್ತು.
ಕೇರಳ ಗಡಿ ಭಾಗದ ಬಸ್ ವ್ಯವಸ್ಥೆಯ ಸಂಯೋಜಕ ಹಾಗೂ ಕಿಟ್ಟೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ್ ಅಬೂರ ಮಾತನಾಡಿ, ಎರಡು ದಿನಗಳ ಪರೀಕ್ಷೆಯಲ್ಲಿ 425 ವಿದ್ಯಾರ್ಥಿಗಳಲ್ಲಿ 300 ವಿದ್ಯಾರ್ಥಿಗಳು ಹಾಜರಾಗಿದ್ದು, 270 ವಿದ್ಯಾರ್ಥಿಗಳನ್ನು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಬಸ್ಗಳಲ್ಲಿ ಜಿಲ್ಲಾಡಳಿತದ ಪರವಾಗಿ ಪರೀಕ್ಷಾ ಕೇಂದ್ರಗಳ ವರೆಗೆ ಕರೆದುಕೊಂಡು ಬರಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ಗಡಿ ಪ್ರದೇಶಗಳಿಗೆ ಅವರನ್ನು ಕರೆದುಕೊಂಡು ಹೋಗಿ ಬಿಡಲಾಯಿತು ಎಂದು ಮಾಹಿತಿ ನೀಡಿದರು.