ಕಡಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕಿಗೆ ಪ್ರಥಮ ಬಾರಿಗೆ ತಾಲೂಕು ಪಂಚಾಯತ್ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷರಾಗಿ ಜಯಂತಿ ಆರ್.ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಯಾವುದೇ ರಾಜಕೀಯ ಜಂಜಾಟಗಳು ನಡೆಯದೆ ಉಪಾಧ್ಯಕ್ಷ ಸ್ಥಾನ ಸಹ ಬಿಜೆಪಿ ಪಾಲಾಗಿದೆ. ಈ ಮೂಲಕ ನೂತನ ಕಡಬ ತಾಲೂಕು ಪಂಚಾಯತ್ ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳಾ ಮಣಿಗಳು ಅಧಿಕಾರ ನಡೆಸಲಿದ್ದಾರೆ.
ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿರುವ ಒಟ್ಟು 42 ಗ್ರಾಮಗಳನ್ನೊಳಗೊಂಡ 13 ತಾ.ಪಂ. ಕ್ಷೇತ್ರಗಳನ್ನು ಸೇರಿಸಿ ಹೊಸ ಕಡಬ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ ಬಂದಿತ್ತು.
ಕಡಬವು ತಾಲೂಕು ಪಂಚಾಯತ್ ಆಗಿ ಮೇಲ್ದರ್ಜೆಗೇರಿ ಎರಡು ವರ್ಷಗಳು ಸಮೀಪಿಸುತ್ತಿದ್ದರೂ ತಾಲೂಕಿಗೆ ಬೇಕಾದ ವಿವಿಧ ಇಲಾಖೆಯ ಕಚೇರಿಗಳು, ಅಭಿವೃದ್ಧಿ ಕೆಲಸಗಳು ಕುಂಠಿತವಾಗಿ ಸಾಗುತ್ತಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನೂತನವಾಗಿ ಆಯ್ಕೆಯಾದ ಕಡಬ ತಾಲೂಕು ಆಡಳಿತ ಮಂಡಳಿ ಈ ಬಗ್ಗೆ ಮುತುವರ್ಜಿ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ.