ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲೂಕಿನ ಕೊಕ್ಕಡ ಸಮೀಪದ ಪ್ರಸಿದ್ಧ ಶ್ರೀ ಸೌತಡ್ಕ ಮಹಾ ಗಣಪತಿ ದೇವಾಲಯದ ಹರಕೆ ಗಂಟೆ ಮಾರಾಟ ವಿಚಾರದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ದೂರಿನಂತೆ, ಇಡೀ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಧಾರ್ಮಿಕ ದತ್ತಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಇಲಾಖೆಯ ಆಯುಕ್ತರಿಗೆ ನೀಡಿದ ಆದೇಶದಲ್ಲಿ ತಿಳಿಸಿದ್ದು, ಅಗತ್ಯವಿದ್ದಲ್ಲಿ ಕಾರ್ಯನಿರ್ವಹಣಾ ಅಧಿಕಾರಿಯವರನ್ನು ಅಮಾನತು ಮಾಡಿ ಪಾರದರ್ಶಕ ತನಿಖೆ ಮಾಡಬೇಕೆಂದು ಸಚಿವರು ಸೂಚಿಸಿದ್ದಾರೆ.
![investigation on sothadka temple](https://etvbharatimages.akamaized.net/etvbharat/prod-images/kn-mng-belthangady-03-sowthadkatemple-photo-kac10018_06042020172641_0604f_1586174201_150.jpg)
ಈ ಮಧ್ಯೆ ದೇವಳದ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ನೂತನ ಆಡಳಿತಾಧಿಕಾರಿಯಾಗಿ ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ನೇಮಕ ಮಾಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದು, ಮುಂದಿನ ಕ್ರಮ ಜರುಗಿಸಲಾಗುವುದೆಂದು ಆಯುಕ್ತರ ಕಚೇರಿಯ ಮೂಲಗಳು ತಿಳಿಸಿದೆ.