ಮಂಗಳೂರು: ಎಷ್ಟು ದೂರ ಕಣ್ಣುಹಾಯಿಸಿದರೂ ಈ ನದಿಯೊಂದರಲ್ಲಿ ಸಾವಿರಾರು ಮಂದಿ ಮೀನು ಹಿಡಿಯುವವರು ಕಾಣಸಿಗುತ್ತಾರೆ. ಆದರೆ ಇವರು ಯಾರೂ ಬೆಸ್ತರಲ್ಲ. ಬದಲಾಗಿ ದೈವಸ್ಥಾನವೊಂದರ ದೈವದ ಪ್ರೀತ್ಯರ್ಥವಾಗಿ ಎಲ್ಲ ಜಾತಿ-ಧರ್ಮ-ಮತದವರು ಒಟ್ಟು ಸೇರಿ ಮೀನು ಹಿಡಿಯುತ್ತಾರೆ. ಬಳಿಕ ಹಿಡಿದ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ದೈವದ ಪ್ರಸಾದವಾಗಿ ತಿನ್ನುತ್ತಾರೆ.
ಇದು ನಡೆಯುವುದು ಮಂಗಳೂರಿನ ಹೊರವಲಯದ ಹಳೆಯಂಗಡಿ ಗ್ರಾಮದ ಕಂಡೇವು ಆಯನ ಜಾತ್ರೆಯಲ್ಲಿ. ಧರ್ಮರಸು ಉಳ್ಳಾಯ ದೈವ ನೆಲೆ ನಿಂತ ಪ್ರಸಿದ್ಧ ಕ್ಷೇತ್ರ ಕಂಡೇವು ಅಥವಾ ಖಂಡಿಗೆಯು ನಂದಿನಿ ನದಿಯ ತಟದಲ್ಲಿದೆ. ಇದನ್ನು ಕಂಡೇವು ಕರಿಯ ಎಂದು ಹೇಳಲಾಗುತ್ತದೆ. ಮಾಮೂಲಿಯಾಗಿ ಈ ಕ್ಷೇತ್ರದ ಸಾನ್ನಿಧ್ಯವಿರುವ ಸ್ಥಳದಲ್ಲಿ ಮೀನು ಹಿಡಿಯುವುದು ನಿಷೇಧ. ಯಾಕೆಂದರೆ ಕಂಡೇವು ಕ್ಷೇತ್ರದ ಒಡೆಯ ಎಂದೇ ಹೇಳಲಾಗುವ ಉಳ್ಳಾಯ ದೈವವೇ ಇಲ್ಲಿ ಮೀನು ಹಿಡಿಯುತ್ತಿರುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಕಂಡೇವು ಕರಿಯದ ಮೀನುಗಳು ಉಳ್ಳಾಯ ದೈವದ ಅಧೀನದಲ್ಲಿವೆ ಎಂದು ಅನಾದಿ ಕಾಲದಿಂದಲೂ ಬಂದಿರುವ ನಂಬಿಕೆ. ಆದರೆ ವರ್ಷಕ್ಕೆ ಒಂದು ದಿನ ಉಳ್ಳಾಯ ದೈವದ ಒಪ್ಪಿಗೆಯ ಮೇರೆಗೆ ಮೀನು ಹಿಡಿಯುವ ವಿಶೇಷ ಜಾತ್ರೆ ನಡೆಯುತ್ತದೆ. ಈ ಪ್ರಕಾರ ವೃಷಭ ಸಂಕ್ರಮಣ (ಮೇ ತಿಂಗಳ 14 ಅಥವಾ 15 ನೇ ತಾರೀಕು)ದಂದು ಎಲ್ಲರಿಗೂ ಇಲ್ಲಿ ಮೀನು ಹಿಡಿಯಲು ಮುಕ್ತ ಅವಕಾಶ ನೀಡಲಾಗುತ್ತದೆ.
ವೃಷಭ ಸಂಕ್ರಮಣದಂದು ಬೆಳ್ಳಂಬೆಳಗ್ಗೆ ದೈವಕ್ಕೆ ಪೂಜೆಯಾಗುತ್ತದೆ. ಬಳಿಕ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಉಳ್ಳಾಯ ದೈವದ ಪ್ರಸಾದ ತಂದು ನದಿಗೆ ಹಾಕುತ್ತಾರೆ. ಬಳಿಕ ಸುಡುಮದ್ದೊಂದನ್ನು ಸಿಡಿಸುತ್ತಾರೆ. ಇದು ಈಗ ಮೀನು ಹಿಡಿಯಬಹುದು ಎಂಬ ಸೂಚನೆ. ಸುಡುಮದ್ದು ಸಿಡಿಸಿದ ತಕ್ಷಣ ಎಲ್ಲರೂ ನದಿಗಿಳಿದು ಮೀನು ಬೇಟೆ ನಡೆಸುತ್ತಾರೆ. ಅಲ್ಲದೆ ಈ ಮೀನನ್ನೇ ಪ್ರಸಾದವೆಂದು ನಂಬಿ ಮಧ್ಯಾಹ್ನದ ಸಮಯ ಪದಾರ್ಥ ಮಾಡಿ ಮನೆ ಮಂದಿ ಎಲ್ಲರೂ ಊಟ ಮಾಡುತ್ತಾರೆ. ಅಲ್ಲದೆ ಈ ಕಂಡೇವಿನ ಜಾತ್ರೆಯು ತುಳುನಾಡಿನ ವಿಶೇಷ ಜಾತ್ರೆಯೂ ಆಗಿದೆ.
ಈ ಸಂದರ್ಭ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಆದಿತ್ಯ ಮುಕ್ಕಾಲ್ದಿಯವರು ಮಾತನಾಡಿ, ದ.ಕ. ಜಿಲ್ಲೆಯ ಪ್ರಸಿದ್ಧ ಕ್ಷೇತ್ರದಲ್ಲಿ ಕಂಡೇವು ಧರ್ಮದೈವ ಉಳ್ಳಾಯ ದೈವಸ್ಥಾನವೂ ಒಂದು. ಇಲ್ಲಿ ವೃಷಭ ಸಂಕ್ರಮಣದಂದು ಮೀನು ಹಿಡಿಯುವ ಜಾತ್ರೆ ಬಹಳ ಪ್ರಸಿದ್ಧ. ಸುಮಾರು 800 ವರ್ಷಗಳ ಪುರಾತನದ ಇತಿಹಾಸವಿರುವ ಶ್ರೀಕ್ಷೇತ್ರಕ್ಕೆ ಉಳ್ಳಾಯ ದೈವ ದೋಣಿಯಲ್ಲಿ ಬಂದು ನೆಲೆನಿಂತಿದ್ದಾನೆ ಎಂಬ ನಂಬಿಕೆ ಇದೆ. ಉಳ್ಳಾಯ ದೈವವು ತನಗೆ ನೆಲೆಯಾಗಲು ಉತ್ತಮವಾದ ಸ್ಥಳ ಹಾಗೂ ಧರ್ಮವಿರುವ ಮಣ್ಣು ಬೇಕೆಂಬ ಕಾರಣಕ್ಕೆ ಬ್ರಾಹ್ಮಣ ವಟು ವೇಷಧಾರಿಯಾಗಿ ಹುಡುಕುತ್ತಾ ದೋಣಿಯಲ್ಲಿ ಬರುತ್ತಾನೆ.
ಈ ಸಂದರ್ಭ ಆತನನ್ನು ಮೊಗವೀರ ಸಮುದಾಯದವರು ಇದಿರುಗೊಳ್ಳುತ್ತಾರೆ. ಆಗ ಮೊಗವೀರರಲ್ಲಿ ದೈವ ತನಗೆ ದಾನ ಧರ್ಮ ನೀಡುವ, ಸತ್ಯವಿರುವ ಸ್ಥಳವೊಂದನ್ನು ತೋರುವಿರಾ ಎಂದು ಹೇಳುತ್ತದೆ. ಆಗ ಮೊಗವೀರರು ಜೈನರ ಸ್ಥಳ ಖಂಡಿಗೆ ಬೀಡು ಅಲ್ಲಿಗೆ ಹೋಗಿ ಎಂದು ದಾರಿ ತೋರುತ್ತಾರೆ. ಯಾರಿಗೂ ಬ್ರಾಹ್ಮಣ ರೂಪದಲ್ಲಿರುವುದು ಧರ್ಮ ದೈವವೆಂದು ಗೊತ್ತಿರುವುದಿಲ್ಲ. ಕೊನೆಗೆ ಉಳ್ಳಾಯ ದೈವ ಇಲ್ಲಿ ಬಂದು ನೆಲೆಯಾಗುತ್ತಾನೆ. ಆ ಸಂದರ್ಭ ಕೊಟ್ಟ ಭಾಷೆ ಮತ್ಸ್ಯ ಬೇಟೆ. ಅನಾದಿ ಕಾಲದಿಂದಲೂ ನಡೆಯುತ್ತಿದ್ದ ಸಂಪ್ರದಾಯ ಈಗಲೂ ಅದು ಮುಂದುವರಿದಿದೆ ಎಂದು ಅವರು ಹೇಳಿದರು.
ಮೀನು ಬೇಟೆಗೆ ಬಂದ ಜಾರ್ಜ್ ಡಿಸೋಜ ಮಾತನಾಡಿ, ವರ್ಷಕ್ಕೊಂದು ಬಾರಿ ಇಲ್ಲಿ ನಮಗೆ ಮೀನು ಹಿಡಿಯಲು ಅವಕಾಶ ದೊರಕಿರುವುದು ಸಂತೋಷದ ಸಂಗತಿ. ನಾವು ಮುಂಬೈಯಿಂದ ಇಲ್ಲಿಗೆ ಬಂದಿದ್ದು, ನಮಗೆ ಇಲ್ಲಿ ಒಳ್ಳೆಯ ಮೀನು ಸಿಗುತ್ತವೆ. ಇಂತಹ ಮೀನು ಎಲ್ಲಿಯೂ ದೊರಕುವುದಿಲ್ಲ. ಇಲ್ಲಿಯ ಮೀನಿಗೆ ವಿಶೇಷ ರುಚಿ ಇದೆ. ನಾವು ಬಹಳ ಚಿಕ್ಕಂದಿನಿಂದಲೂ ಇಲ್ಲಿಗೆ ಪ್ರತಿ ವರ್ಷ ಮೀನು ಹಿಡಿಯಲು ಬರುತ್ತಿರುತ್ತೇವೆ ಎಂದು ಹೇಳಿದರು.