ಬೆಳ್ತಂಗಡಿ: ಕೋವಿಡ್ ಲಾಕ್ಡೌನ್ ತೆರವಾಗದಿದ್ದರೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತಾದಿಗಳು ಆಗಮಿಸುತಿದ್ದಾರೆ. ಈಗಾಗಲೇ ಇತರ ಜಿಲ್ಲೆಗಳಿಗೆ ಪ್ರಯಾಣಿಸಲು ಅನುಮತಿ ಇರುವುದರಿಂದ ಭಕ್ತಾದಿಗಳು ಧರ್ಮಸ್ಥಳಕ್ಕೆ ಆಗಮಿಸಿ ನೇತ್ರಾವತಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಆದರೆ ದಕ್ಷಿಣ ಕನ್ನಡದಲ್ಲಿ ಲಾಕ್ಡೌನ್ ನಿಯಮ ಕಠಿಣವಾಗಿರುವುದರಿಂದ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಧರ್ಮಸ್ಥಳ ಆಡಳಿತ ಮಂಡಳಿ ಕೂಡ ದೇವಸ್ಥಾನಕ್ಕೆ ಲಾಕ್ಡೌನ್ ಮುಗಿಯುವವರೆಗೆ ಪ್ರವೇಶ ಇರುವುದಿಲ್ಲ ಎಂಬ ಪ್ರಕಟಣೆ ಹೊರಡಿಸಿದೆ. ಹೀಗಾಗಿ ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು ದೇವಸ್ಥಾನದ ಹೊರಗಿನಿಂದಲೇ ದೇವರ ದರ್ಶನ ಪಡೆದು ತೆರಳುತ್ತಿದ್ದಾರೆ.
ಇತರೆ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ಇರುವುದರಿಂದ ಬೆಂಗಳೂರು ಹಾಗೂ ಇತರ ಕಡೆಗಳಿಂದ ಜಿಲ್ಲೆಗಳ ಪ್ರಸಿದ್ಧ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಅಧಿಕವಾಗಿದೆ. ಆದರೆ ಇಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮಾವಳಿ ಹಾಗೂ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷಿದ್ಧ ಇರುವುದರಿಂದ ಭಕ್ತರು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.
ಅಲ್ಲದೇ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತಿದ್ದು, ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹಾಗಾಗಿ ನದಿಯಲ್ಲಿ ಸ್ನಾನ ಮಾಡುವವರಿಗೆ ಎಚ್ಚರಿಕೆ ಸಹ ನೀಡಲಾಗುತ್ತಿದೆ.