ಮಂಗಳೂರು: ದೇಶದಲ್ಲಿ ಯಾವುದೇ ವಿರೋಧ ಪಕ್ಷಗಳು ಉಳಿಯಲೇಬಾರದು ಎಂಬ ಉದ್ದೇಶದಿಂದ ಇಡಿಯವರ ಮೂಲಕ ರಾಜಕಾರಣಿಗಳಿಗೆ ಬಿಜೆಪಿಗೆ ಕಿರುಕುಳ ನೀಡುತ್ತಿದೆ. ಅಲ್ಲದೆ ಅವರ ಮನೆಯವರನ್ನು ಕರೆಸಿ ಅವರಿಗೆ ಕಿರುಕುಳ ಕೊಡಿಸುತ್ತಿದೆ. ಈ ರೀತಿಯಲ್ಲಿ ಬಿಜೆಪಿ ನಡೆಸುತ್ತಿರುವ ದ್ವೇಷದ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾಂಗ್ರೆಸ್ ಮುಖಂಡ, ಶಕ್ತಿ ಪ್ರಾಜೆಕ್ಟ್ನ ಮುಖ್ಯ ಪ್ರವರ್ತಕ ಸೂರಜ್ ಹೆಗ್ಡೆ ಕಿಡಿಕಾರಿದರು.
ಮುಖ್ಯಮಂತ್ರಿಯವರು ಡಿಕೆಶಿ ಬಗ್ಗೆ ಅನುಕಂಪ ಇದೆ. ಈ ತರಹ ನಡೆದುಕೊಳ್ಳಬಾರದಿತ್ತು ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹೇಗಿದೆ. ಎರಡು ವರ್ಷಗಳ ಕಾಲ ನಷ್ಟದಲ್ಲಿದ್ದ ಅಮಿತ್ ಶಾ ಅವರ ಮಗನ ಕಂಪನಿ ಒಂದೇ ವರ್ಷದಲ್ಲಿ 80 ಕೋಟಿ ರೂ. ಲಾಭ ಗಳಿಸುತ್ತದೆ. ಆದ್ರೆ ಇಡಿಯವರು ಇಲ್ಲಿವರೆಗೆ ಸಮನ್ಸ್ ಯಾಕೆ ನೀಡಿಲ್ಲ ಎಂದು ಪ್ರಶ್ನೆ ಮಾಡಿದರು.
ರೈತರ ಸಾಲಮನ್ನಾದ ಬಗ್ಗೆ ಕಾಂಗ್ರೆಸ್ಗೆ ಪ್ರಶ್ನೆ ಕೇಳುತ್ತಿದ್ದ ಬಿಜೆಪಿಗರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಇಷ್ಟು ಸಮಯವಾದರೂ ಯಾಕೆ ಅದರ ಬಗ್ಗೆ ಚಿಂತನೆ ಮಾಡಿಲ್ಲ. ಮೂರು ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇದ್ದರೆ, ಈಗ ಪ್ರವಾಹದ ಭೀಕರತೆಯಿಂದ ಎಲ್ಲಾ ಕಡೆಗಳಲ್ಲಿ ಹಾನಿಯಾಗಿದೆ. ಎನ್ ಡಿ ಆರ್ ಎಫ್ ಗೆ ನಾವು ಇದನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ಎಂದು ಘೋಷಣೆ ಮಾಡಿ ಎಂದು ಕೇಳಿಕೊಂಡಿದ್ದೆವು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಆದರೆ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.