ಪುತ್ತೂರು: ಅಲ್ಬಾವಧಿ, ದೀರ್ಘಾವಧಿ ಸೇರಿದಂತೆ ಇನ್ನಿತರ ಕೃಷಿ ಸಾಲದ ಕಂತು ಕಟ್ಟಲು ಆ.31 ರ ತನಕ ಅವಧಿ ಇದ್ದರೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕಂತು ಕಟ್ಟುವಂತೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಜೂ 30.ರೊಳಗೆ ಸ್ಪಷ್ಟನೆ ಕೊಡದಿದ್ದರೆ ಸಹಕಾರಿ ಸಂಘಗಳ ಉನ್ನತ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಲದ ಕಂತು ಕಟ್ಟಲು ಜೂ.30ಕ್ಕೆ ಇದ್ದ ಅವಧಿಯನ್ನು ಆ. 31 ರ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಸುತ್ತೋಲೆಯನ್ನು ಪ್ರತೀ ಸಹಕಾರಿ ಸಂಘಗಳಿಗೆ ಆರ್ಬಿಐ ಕಳುಹಿಸಿದೆ. ಆದರೆ, ಬ್ಯಾಂಕ್ ಅಧಿಕಾರಿಗಳು ಈ ಸುತ್ತೋಲೆಯನ್ನು ನೋಟಿಸ್ ಬೋರ್ಡಿನಲ್ಲಿ ಹಾಕಿಲ್ಲ. ಕಂತು ಕಟ್ಟುವಂತೆ ಜಾಮೀನುದಾರರ ಮೂಲಕ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ಕೆಲವೊಂದು ರೈತರು ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಅಡ ಇಟ್ಟು ಕಂತು ಕಟ್ಟಿದ್ದಾರೆ. ಇದು ಬಡ ರೈತರಿಗೆ ಕೊರೊನಾ ಸೋಂಕಿಗಿತಲೂ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಇಷ್ಟೆಲ್ಲಾ ಆಗುತ್ತಿದ್ದರೂ ಯಾವುದೇ ರಾಜಕಾರಣಿಗಳು, ಜನಪ್ರತಿನಿಧಿಗಳು, ರೈತ ಪರ ಸಂಘಟನೆಗಳು ಗಮನಿಸದೇ ಇರುವುದು ವಿಪರ್ಯಾಸ. ಒಂದೆಡೆ ಕೊರೊನಾ ಸೋಂಕು ದೈಹಿಕ ಹಿಂಸೆ ಆದರೆ ಇನ್ನೊಂದೆಡೆ ಸಹಕಾರಿ ಸಂಘಗಳು ಮಾನಸಿಕ ಹಿಂಸೆಯಾಗಿದೆ. ಇವೆಲ್ಲದರ ನಡುವೆ ರೈತರಿಂದ ಬೆಳೆವಿಮೆಯನ್ನು ಎರಡು ಬಾರಿ ಕಟ್ಟಿಸಿಕೊಂಡಿದ್ದಾರೆ. ಎರಡು ವರ್ಷ ಸಂದರೂ ಶೇ.50 ರಷ್ಟು ಜನರಿಗೆ ಮಾತ್ರ ಸಾಲ ಮನ್ನಾ ಆಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಸದಸ್ಯ ಡಿ.ಆರ್.ಬಾಲಕೃಷ್ಣ ಶಿರಾಡಿ, ಕೆ.ಪಿ.ವಿಜಯ ಶಿರಾಡಿ ಇದ್ದರು.