ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ. 21 ರಿಂದ 26 ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ದೇವಿಯ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಅಮ್ಮನ ಚರಿತ್ರೆ- ಚಿಣ್ಣರ ವಿಮರ್ಶೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಚಿಣ್ಣರ ಸಮಿತಿಯಿಂದ ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಯೋಜನೆಯೊಂದಿಗೆ "ಅಮ್ಮನ ಚರಿತ್ರೆ, ಚಿಣ್ಣರ ವಿಮರ್ಶೆ" ಕಾರ್ಯಕ್ರಮಕ್ಕೆ ಕೋಡಿಬಾಡಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಸುಮಾರು 150 ಶಾಲೆಗಳಲ್ಲಿ ಈ ಚಿಣ್ಣರ ವಿಮರ್ಶೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ದೇವಿಯ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಚಿಣ್ಣರೇ ಮಾಡಲಿದ್ದಾರೆ. ರಸಪ್ರಶ್ನೆಯಲ್ಲಿ ಬಹುಮಾನ ಪಡೆದ ಮಕ್ಕಳನ್ನು ಸನ್ಮಾನಿಸುವ ಕಾರ್ಯವೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆಯಲಿದೆ. ದೇವಸ್ಥಾನದಲ್ಲಿ ಚಿಣ್ಣರ ಸಮಿತಿಯನ್ನು ರಚಿಸಲಾಗಿದ್ದು, ದೇವಿ ಚರಿತ್ರೆಯನ್ನು ಮಕ್ಕಳಲ್ಲಿ ತುಂಬುವ ಕೆಲಸ ಈ ಚಿಣ್ಣರ ಸಮಿತಿ ಮೂಲಕ ನಡೆಯಲಿದೆ.
ಬ್ರಹ್ಮಕಲಶೋತ್ಸವದಲ್ಲಿ ಈ ಭಾಗದ ಪ್ರತಿ ಕುಟುಂಬಗಳನ್ನು ಸೇರಿಸಿಕೊಳ್ಳುವ ಇರಾದೆಯಿಂದ ದೇವಳಕ್ಕೆ ಬೇಕಾದ ಅಕ್ಕಿಯನ್ನು ಬೆಳೆಸುವ ಗದ್ದೆ ಬೇಸಾಯ, ಮನೆಗೊಂದು ಬಾಳೆಗಿಡ-ದೇವಿಗೊಂದು ಬಾಳೆಗೊನೆ, ತರಕಾರಿ ಬೆಳೆಸುವುದು ಮುಂತಾದ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಆಯ್ದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚಿಣ್ಣರ ಸಮಿತಿ ಅಧ್ಯಕ್ಷ ಪ್ರದೀಲ್ ಎ.ರೈ ಅಧ್ಯಕ್ಷತೆ ವಹಿಸಿದ್ದರು.