ಬಂಟ್ವಾಳ: ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕಾಲ್ಬೆರಳಲ್ಲೇ ಬರೆದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿದ್ದ ಬಂಟ್ವಾಳದ ಕೌಶಿಕ್ನಿಗೆ ಇದೀಗ 424 ಅಂಕ ಲಭಿಸಿದ್ದು, ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ಶಿಕ್ಷಣ ಸಚಿವರಿಂದಲೇ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್. ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ ಹತ್ತನೇ ತರಗತಿ ವಿದ್ಯಾರ್ಥಿ ಕೌಶಿಕ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಅಂಕ ಗಳಿಸಿದ್ದಾನೆ.

ಕನ್ನಡದಲ್ಲಿ -96, ಆಂಗ್ಲ ಭಾಷೆಯಲ್ಲಿ- 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 ಅಂಕಗಳು ಕೌಶಿಕ್ಗೆ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್, ಪಿಯುಸಿ ವಾಣಿಜ್ಯ ವಿದ್ಯಾಭ್ಯಾಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಈತನಿಗೆ ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡುವುದಾಗಿ ತಿಳಿಸಿದ್ದಾರೆ.

ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿಯ ಪುತ್ರ ಕೌಶಿಕ್ ತನ್ನ ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾನೆ. ತಂದೆ ಮರಗೆಲಸ ಮಾಡುತ್ತಿದ್ದು, ಬಡತನವಿದ್ದರೂ ಹುಟ್ಟುವಾಗಲೇ ತನ್ನೆರಡೂ ಕೈಗಳಿಲ್ಲದೇ ಕೌಶಿಕ್ ದಿವ್ಯಾಂಗನಾಗಿದ್ದರೂ ಸಹ ಯಾರ ಸಹಾಯವೂ ಇಲ್ಲದೇ ಕಾಲ್ಬೆರಳಲ್ಲೇ ಬರೆಯಲು ಕಲಿತಿದ್ದಾನೆ. ಅಂಗವೈಕಲ್ಯವಿದೆ ಎಂಬ ಚಿಂತೆಯಿಂದ ಕೊರಗದೆ ಮನೆಯವರೂ ಬಾಲಕನ ಚಟುವಟಿಕೆಗಳಿಗೆ ತುಂಬು ಮನಸ್ಸಿನಿಂದ ಪ್ರೋತ್ಸಾಹ ನೀಡುತ್ತಿದ್ದಾರೆ.
ಕಾಲಿನ ಸಹಾಯದಲ್ಲೇ ಮಣ್ಣಿನ ಕಲಾಕೃತಿ ರಚಿಸುವುದು, ಡ್ಯಾನ್ಸ್ ಮಾಡುವುದು, ಸೈಕಲ್ನಲ್ಲಿ ಸವಾರಿ, ಈಜು ಈತನ ಆಸಕ್ತಿಯ ವಿಷಯಗಳು. ಸಣ್ಣ ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿರುವ ಈ ದಿನಗಳಲ್ಲಿ ಕೌಶಿಕ್ ತನ್ನೆಲ್ಲಾ ಚಟುವಟಿಕೆಗಳ ಮೂಲಕ ಮನೆಯಲ್ಲಿ ಬಡತನವಿದ್ದರೂ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೇ ಬರೆದು ಉತ್ತಮ ಅಂಕಗಳನ್ನೂ ಗಳಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾನೆ.