ಬಂಟ್ವಾಳ : ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಣೇಶ ಎಂಬಾತ ನಾಪತ್ತೆಯಾಗಿದ್ದಾನೆ.
ಕಾಣೆಯಾಗಿರುವ ಬಾಲಕ ಕರೋಪ್ಪಾಡಿ ಗ್ರಾಮದ ಹನುಮಂತ ಎಸ್ ಸುಡುಗಾಡಸಿದ್ದರವರ ಮಗ. ಹನುಮಂತ ಕಳೆದ 8 ವರ್ಷಗಳಿಂದ ಕರೋಪ್ಪಾಡಿ ಗ್ರಾಮದ ಒಡಿಯೂರು ದೇವಸ್ಥಾನದಲ್ಲಿ ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ.
ಮೊದಲನೇ ಮಗ ಗಣೇಶ (15) ಒಡಿಯೂರು ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಕೊರೊನಾ ಕಾರಣದಿಂದಾಗಿ ಶಾಲೆಗೆ ರಜೆ ಇದ್ದುದರಿಂದ ಮನೆಯಲ್ಲಿದ್ದ ಗಣೇಶ ಆನ್ಲೈನ್ ಕ್ಲಾಸಿಗಾಗಿ ತನ್ನ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ಪಡೆಯುತ್ತಿದ್ದ.
ಆದರೆ, ಕ್ಲಾಸ್ಗಿಂತ ಹೆಚ್ಚಾಗಿ ಪಬ್ ಜೀ ಗೇಮ್ ಆಡುತ್ತಿದ್ದ. ಅದನ್ನು ಗಮನಿಸಿದ ತಂದೆ ಗೇಮ್ ಆಡಬೇಡ ಓದಿಕೋ ಎಂದು ಹಲವಾರು ಬಾರಿ ಬುದ್ಧಿವಾದ ಹೇಳಿದರು ಲೆಕ್ಕಿಸದೆ ಇದ್ದಾಗ, ಆತನನ್ನು ಒಡಿಯೂರು ಶಾಲೆಗೆ ಕರೆದುಕೊಂಡು ಹೋಗಿ ಈ ವಿಚಾರವನ್ನು ಶಿಕ್ಷಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಗಣೇಶನಿಗೆ ಬುದ್ಧಿವಾದ ಹೇಳಿ ಸೋಮವಾರದಂದು ಶಾಲೆಗೆ ಬರುವಂತೆ ಹೇಳಿ ಕಳುಹಿಸಿದ್ದರು.
ಹನುಮಂತರವರು ಕೆಲಸಕ್ಕೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಮಗ ಗಣೇಶ ಮನೆಯಲ್ಲಿ ಇರಲಿಲ್ಲ, ಮಕ್ಕಳಲ್ಲಿ ವಿಚಾರಿಸಿದಾಗ ಶಾಲೆಯಿಂದ ಬಂದ ಬಳಿಕ ಮನೆಯಿಂದ ಹೊರಗೆ ಹೋದವನು ಈವರೆಗೆ ಬರಲಿಲ್ಲವೆಂದು ತಿಳಿಸಿದರು.
ಹನುಮಂತ ಕರೋಪ್ಪಾಡಿ, ವಿಟ್ಲ ಮತ್ತಿತರ ಸ್ಥಳಗಳಲ್ಲಿ ಹುಡುಕಾಡಿ ಸಂಬಂಧಿಕರ ಬಳಿ ದೂರವಾಣಿ ಮುಖಾಂತರ ವಿಚಾರಿಸಿದ್ದಾರೆ. ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆ ಅಪ್ರಾಪ್ತ ವಯಸ್ಸಿನ ಮಗನನ್ನು ಯಾರಾದ್ರೂ ಅಪಹರಿಸಿರಬಹುದೇ ಅಥವಾ ಕಾಣೆಯಾಗಿರಬಹುದೇ ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.