ಚಿಕ್ಕಮಗಳೂರು: ಸುಮಾರು ಎರಡು ದಶಕಗಳ ಕಾಲ ದೇಶದ ಸೇವೆ ಸಲ್ಲಿಸಿ, ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಯೋಧನೋರ್ವ 21 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ಬಳಿಕ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ ಎಂಬ ವಿಚಾರ ತಿಳಿದ ಊರಿನ ಯುವಕರು ಆತನ ಬರುವಿಕೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಸೇವೆ ಮುಗಿಸಿ ಬಂದ ಹೆಮ್ಮೆಯ ಪುತ್ರನಿಗೆ ಸ್ವಾಗತ ಕೋರಿದ ಪರಿಯೇ ವಿಭಿನ್ನವಾಗಿತ್ತು.
ತೆರೆದ ಪಿಕಪ್ ವಾಹನವನ್ನು ಶೃಂಗಾರ ಮಾಡಿರುವ ಗ್ರಾಮಸ್ಥರು, ಆ ವಾಹನದಲ್ಲಿ ಯೋಧನ ಮೆರವಣಿಗೆ ಮಾಡಿ ಹೂಗುಚ್ಛ ನೀಡಿ ಅದ್ಧೂರಿ ಸ್ವಾಗತ ಕೋರಿದರು. ಗ್ರಾಮದ ದ್ವಾರ ಬಾಗಿಲಿನಿಂದ ಇಡೀ ಗ್ರಾಮದಾದ್ಯಂತ ಮೆರವಣಿಗೆ ಮಾಡಿದರು. ಯೋಧ ಚಂದ್ರಶೇಖರ್ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಜೈಕಾರ ಕೂಗಿದರು. ಅಲ್ಲದೆ ಅವರ ಬಾಲ್ಯ ಸ್ನೇಹಿತರು ತಬ್ಬಿ ಸಂತೋಷದಿಂದ ಸಂಭ್ರಮಿಸಿದರು. ಇಂತಹ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರಿನ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮ.
ಗ್ರಾಮದ ಚಂದ್ರಶೇಖರ್ ಬಿಎಸ್ಎಫ್ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸಿದ್ದಾರೆ.
ಈ ವೇಳೆ ಚಂದ್ರಶೇಖರ್ ಪ್ರತಿಕ್ರಿಯಿಸಿ, ದೇಶ ಸೇವೆ ಮಾಡಿರೋದು ಗ್ರಾಮಸ್ಥರಲ್ಲಿ ಸ್ಫೂರ್ತಿ ತಂದಿದೆ. ಕಾಶ್ಮೀರದ ಹಿಮಪಾತದಲ್ಲಿ ಸಿಲುಕಿ ಮೂರು ದಿನ ಒಂದು ಲೀಟರ್ ನೀರು ಕುಡಿದು ಬದುಕಿದ್ದ ಘಟನೆಯನ್ನು ಹೇಳಿಕೊಳ್ಳುವ ಮೂಲಕ ಗಡಿ ಕಾಯುವ ಯೋಧರು ಹೇಗೆಲ್ಲಾ ಕಷ್ಟ ಅನುಭವಿಸುತ್ತಾರೆ ಎಂಬುದನ್ನು ಯೋಧ ಚಂದ್ರಶೇಖರ್ ತಿಳಿಸಿದರು.
ನಾನು ಯೋಧನಾಗುತ್ತೇನೆಂದು ನಮ್ಮ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ಯಾರೇ ಬಂದರೂ ಅವರಿಗೆ ಟ್ರೈನಿಂಗ್ ನೀಡೋದಕ್ಕೂ ನಾನು ಸಿದ್ಧ ಎಂದು ಚಂದ್ರಶೇಖರ್ ಹೇಳಿದರು.