ಚಿಕ್ಕಬಳ್ಳಾಪುರ: ನಾನು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊಡಗಿನ ಸುದರ್ಶನ್ ಗೆಸ್ಟ್ ಹೌಸ್ನಲ್ಲಿ ಮಧ್ಯಾಹ್ನ ಊಟ ಮಾಡಿದ್ದೆ. ಬಳಿಕ ಸಂಜೆ ಅಲ್ಲಿನ ಬಸವೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು? ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪೇನು? ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವ್ಯಾರು? ಎಂದು ನಗರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೊಡಗು ಭೇಟಿ ವೇಳೆ ಮಾಂಸದೂಟ ಮಾಡಿ ಬಳಿಕ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು ಎಂಬ ಆರೋಪದ ಬಗ್ಗೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪಿದೆಯಾ? ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವು ಯಾರು? ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು? ಒಂದು ದಿನದ ಮುಂಚೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪಾಗಲ್ವಾ. ಮಾಂಸಾಹಾರಿಗಳು ಮಾಂಸ ತಿಂತಾರೆ, ಸಸ್ಯಾಹಾರಿಗಳು ಸಸ್ಯಾಹಾರ ತಿಂತಾರೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಡ ಅಂತ ಕೇಳೋಕೆ ನೀವ್ಯಾರು ಎಂದು ಗರಂ ಆದರು.
ಜನೋತ್ಸವ ಅಲ್ಲ, ಭ್ರಷ್ಟೋತ್ಸವ.. ನಾನು ಕೊಡಗಿಗೆ ದಾಳಿ ಮಾಡಲು ಹೋಗುತ್ತಿಲ್ಲ, ಜನರ ಕಷ್ಟಗಳಿಗ ಸ್ಪಂದಿಸಲು ಹೋಗುತ್ತಿದ್ದೇನೆ. ಆದರೆ ಬಿಜೆಪಿಯವರಿಗೆ ನಮ್ಮ ಏಳಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಡಲು ಈ ರೀತಿ ಅಪಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಅವರದು ಜನೋತ್ಸವ ಅಲ್ಲ, ಅದು ಭ್ರಷ್ಟೋತ್ಸವ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ: ಕೊಡಗಿನಲ್ಲಿ ಅಶಾಂತಿಯ ವಾತಾವರಣ
ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದುವಾಗಿ ಹುಟ್ಟಿದ್ದೆ, ಸಾಯಬೇಕಾದರೆ ಹಿಂದುವಾಗಿ ಸಾಯಲಾರೆ ಅಂತ ಹೇಳಿದ್ದರು. ವಿಶ್ವಮಾನವ ರಾಷ್ಟ್ರ ಕವಿ ಕುವೆಂಪು ಅವರ ಅಶದಯದಂತೆ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿದೆಯಾ? ಅಂಬೇಡ್ಕರ್ ಶೋಷಿತ ವರ್ಗದವರು ಶಿಕ್ಷಣ, ಸಂಘಟನೆ, ಹೋರಾಟ ಮಾಡಬೇಕು, ಜಾಗೃತರಾಗಬೇಕು ಎಂದು ಸಾಮಾಜಿಕ ನ್ಯಾಯದ ರಥ ಎಳೆದು ತಂದಿದ್ದಾರೆ. ಅದನ್ನು ಹಿಂದಕ್ಕೆ ತಳ್ಳುವ ಕೆಲಸ ಮಾಡಬಾರದು ಎಂದು ಹೇಳಿದರು.
ಬಿಜೆಪಿಯ ಬಣ್ಣದ ಮಾತುಗಳನ್ನು ಕೇಳಿ ಸಂವಿಧಾನಕ್ಕೆ ಧಕ್ಕೆ ತರಬಾರದು. ದಲಿತರನ್ನು ಆರ್ಎಸ್ಎಸ್ ಸಂಘದ ಅಧ್ಯಕ್ಷರಾಗಿ ಮಾಡಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಇತಿಹಾಸದಲ್ಲಿ ಅದನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಅಲ್ಲಿ ಮೋಹನ್ ಭಾಗವತ್, ಗೋಲ್ವಾಲ್ಕರ್, ಸಾವರ್ಕರ್ ಅಂತವರು ಮಾತ್ರ ಇರುತ್ತಾರೆ. ಅಂತರ್ಜಾತಿ ವಿವಾಹದ ಮೂಲಕ ಜಾತಿ ತೊಲಗಬೇಕು. ಬಸವಣ್ಣನ ಆಶಯ ರೂಢಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಟಿಪ್ಪುವನ್ನು ಬಿಜೆಪಿಯವರು ಈಗ ವಿರೋಧ ಮಾಡುತ್ತಿದ್ದಾರೆ. ಈ ಹಿಂದೆ ಟಿಪ್ಪು ವೇಷಭೂಷಣ ಧರಿಸಿದ್ದು ನಾಟಕವೇ? ಅಶೋಕ್, ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಬೆಂಬಲಿಸಿದ್ದು ಯಾಕೆ? ಟಿಪ್ಪು ಪುಸ್ತಕಕ್ಕೆ ಯಡಿಯೂರಪ್ಪ ಅವರೇ ಮುನ್ನಡಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ