ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 2ನೇ ಶ್ರೀಕೃಷ್ಣ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ವಿಗ್ರಹ ಹಾಗೂ ದೇವಸ್ಥಾನ ಪ್ರತಿಷ್ಠಾಪನೆ ಮಹೋತ್ಸವವನ್ನು 3 ದಿನಗಳಿಂದ ತಾಲೂಕಿನ ಕಡಶೀಗನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಸುಮಾರು 1 ವರ್ಷ 8 ತಿಂಗಳಿಂದ 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಉಡುಪಿಯಲ್ಲಿ ಬಿಟ್ಟರೆ ಚಿಕ್ಕಬಳ್ಳಾಪುರದಲ್ಲಿ 2ನೇ ಸ್ಥಾನದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.
ಪ್ರತಿಷ್ಠಾಪನೆ ಕಾರ್ಯವನ್ನು ಕಳೆದ ಮೂರು ದಿನಗಳ ಕಾಲ ಗ್ರಾಮಸ್ಥರು ಹಾಗೂ ಜಿಲ್ಲೆಯ ಜನತೆ ಅದ್ದೂರಿಯಾಗಿ ಮಾಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ದಾನಿಗಳು, ಅತಿಥಿಗಳು ಭಕ್ತಾದಿಗಳು ಆಗಮಿಸಿ ಶ್ರೀಕೃಷ್ಣನ ಆಶೀರ್ವಾದ ಪಡೆದಿದ್ದಾರೆ. ಶ್ರೀಕೃಷ್ಣ ಜನ್ಮದಿನಾಚರಣೆ ಹಿನ್ನೆಲೆ ದೇವಸ್ಥಾನಕ್ಕೆ ಹಾಗೂ ಶ್ರೀಕೃಷ್ಣನ ವಿಗ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ.
ನೂತನ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ಕಳೆದ ಎರಡು ದಿನಗಳಿಂದ ಕಡಶೀಗೆನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣವಿತ್ತು. ವಿಶೇಷ ಹೋಮ, ಯಜ್ಞಯಾಗದಿಗಳನ್ನು ಮಾಡಲಾಗಿತ್ತು. ಬಳಿಕ ವಿಶೇಷ ಪೂಜೆ ಮಾಡಿ ಶ್ರೀಕೃಷ್ಣನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಆನಂದ್ ಗುರೂಜಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಹರಿದ್ವಾರ ಋಷಿ ಕೇಶಿ ಕಾಶಿಯಿಂದ ತಂದಿರುವಂತಹ ಪವಿತ್ರ ಗಂಗಾ ಜಲವನ್ನು ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ ಮಹಾ ಮಂಗಳಾರತಿ ಮಾಡಿ ದೇವರ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ಬಾಲಕನಿಗೆ ಶ್ರೀಕೃಷ್ಣನ ಪೋಷಾಕು ತೊಡಿಸಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ