ಕೊಳ್ಳೇಗಾಲ : ಪಟ್ಟಣದಲ್ಲಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಕಳ್ಳರು, ನಡುರಾತ್ರಿ ಆರು ಮನೆಗಳಲ್ಲಿ ದೋಚಿದ್ದಾರೆ. ಆರು ಮನೆಗಳ ಮಾಲೀಕರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣ, ಡಿವೈಎಸ್ಪಿ ನವೀನ್ಕುಮಾರ್ ಅವರು ಕಳ್ಳತನ ನಡೆದಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊರೊನಾ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆಯಿದ್ದ ಕಾರಣ, ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗಳಿಗೆ ತೆರಳಿದ್ದರು.
ಆಶ್ರಯ ಬಡಾವಣೆಯ ಮೊಹಮ್ಮದ್ ರಫೀಕ್ ಅವರ ಮನೆಗೆ ನುಗ್ಗಿದ ಕಳ್ಳರು ₹50 ಸಾವಿರ ನಗದು 8 ಗ್ರಾಂ ಚಿನ್ನವನ್ನು ದೋಚಿದ್ದಾರೆ. ಜೊತೆಗೆ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇಟ್ಟಿದ್ದ 136 ಕೆಜಿ ರೇಷ್ಮೆ ನೂಲನ್ನು ಕದ್ದೊಯ್ದಿದ್ದಾರೆ. ಪಕ್ಕದ ಮನೆಯ ಸುರೇಶ್ ಎಂಬುವರ ಮನೆಯಲ್ಲೂ ಬೀರುವಿನಲ್ಲಿದ್ದ 15 ಗ್ರಾಂ ಚಿನ್ನ, ₹30 ಸಾವಿರ ನಗದು ತೆಗೆದುಕೊಂಡಿದ್ದಾರೆ.
![The police inspected](https://etvbharatimages.akamaized.net/etvbharat/prod-images/kn-cnr-kollegal-crime-kac10017_24072020171926_2407f_1595591366_250.jpg)
ಅದೇ ಬೀದಿಯ ಹುಸೇನ್ ಅವರ ಮನೆಯಲ್ಲೂ ಕಳ್ಳತನಕ್ಕೆ ನುಗ್ಗಿದ ಕಳ್ಳರಿಗೆ ₹3 ಸಾವಿರ ನಗದು ಬೆಳ್ಳಿ ದೊರಕಿದೆ ಎನ್ನಲಾಗಿದೆ. ನೂರ್ಮೊಹಲ್ಲಾ ಆಲಿಂಪಾಷ ಅವರ ಮನೆಯಲ್ಲಿ ಏನೂ ದೊರಕದ ಕಾರಣ ಬರಿ ಕೈಯಲ್ಲೇ ತೆರಳಿದ್ದಾರೆ. ಅಚ್ಗಾಳ್ ಬಡಾವಣೆಯ ಆಸಿಕ್ ಅವರ ಮನೆಯಲ್ಲಿ ₹8 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.
ಸರಣಿ ಕಳ್ಳತನ ಮಾಡಿರುವ ಕಳ್ಳರ ಕುರಿತು ಸುಳಿವು ಸಿಕ್ಕಿದೆ. ಶೀಘ್ರದಲ್ಲಿಯೇ ಕಳ್ಳರನ್ನು ಬಂಧಿಸಲಾಗುವುದು. ಎಲ್ಲಾ ಬಡಾವಣೆಗಳಲ್ಲಿ ಹೆಚ್ಚಿನ ಪೊಲೀಸ್ ಗಸ್ತಿನ ವ್ಯವಸ್ಥೆ ಮಾಡಲಾಗುತ್ತದೆ. ಯಾರೂ ಆತಂಕಕ್ಕೊಳಗಾಗಬೇಡಿ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕಳ್ಳತನ ನಡೆದಿರುವ ಮನೆಗಳಲ್ಲಿ ಶ್ವಾನಗಳಿಂದ ಪರಿಶೀಲನೆ ನಡೆಸಲಾಗಿದೆ. ಬೆರಳಚ್ಚು ತಜ್ಞರನ್ನು ಬರಮಾಡಿಕೊಂಡು ಎಲ್ಲಾ ಮನೆಗಳಲ್ಲಿಯೂ ಕಳ್ಳತನ ನಡೆದಿರುವ ಕುರುಹುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.