ಚಾಮರಾಜನಗರ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದರಿಂದ ಗಾಬರಿಗೊಂಡು ಓಡುವ ವೇಳೆ ವ್ಯಕ್ತಿವೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಂತೇಮರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತೇಮರಹಳ್ಳಿ ಹೋಬಳಿಯ ಹೊಮ್ಮ ಗ್ರಾಮದ ವರದನಾಯಕ(50) ಮೃತ ವ್ಯಕ್ತಿ. ಸುವರ್ಣಾವತಿ ನದಿ ಪಾತ್ರದ ಜಮೀನೊಂದರಲ್ಲಿ ವರದನಾಯಕ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದರು. ಇದರಿಂದ ಗಾಬರಿಗೊಂಡ ವರದನಾಯಕ ಓಡಿ ಹೋಗುವ ವೇಳೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸುವರ್ಣಾವತಿ ನದಿ ಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.