ಚಾಮರಾಜನಗರ: ಇಬ್ಬರನ್ನು ಕೊಂದು ಹಾಕಿರುವ ನರಭಕ್ಷಕನ ಸೆರೆಗೆ ಅರಣ್ಯ ಇಲಾಖೆ 8 ಮಂದಿಯಂತೆ ಆರು ತಂಡಗಳನ್ನು ರಚಿಸಿದ್ದು ಕೂಂಬಿಂಗ್ ನಡೆಸುತ್ತಿದ್ದಾರೆ.
ಚೌಡಹಳ್ಳಿ, ಕಲಿಗೌಡನಹಳ್ಳಿ, ಶಿವಪುರ, ಕೆಬ್ಬೇಪುರ ಎಲ್ಲೆ, ಹುಂಡೀಪುರ ಭಾಗಗಳಲ್ಲಿ ಕೂಂಬಿಂಗ್ ನಡೆಸುತ್ತಿದ್ದು, ಹುಲಿಯನ್ನು ಕೊಲ್ಲುವ ಬದಲು ಸೆರೆ ಹಿಡಿಯುವುದು ಇಲಾಖೆಯ ಮೊದಲ ಆದ್ಯತೆ ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆಗೆ ಗಣೇಶ, ಪಾರ್ಥಸಾರಥಿ, ರೋಹಿತ್ ಮೂರು ಆನೆಗಳನ್ನು ಬಳಕೆ ಮಾಡಲಿದ್ದು, ಗೋಪಾಲಸ್ವಾಮಿ, ಕೃಷ್ಣ, ಅಭಿಮನ್ಯು ಆನೆಗಳನ್ನು ಕರೆಸಲಾಗುತ್ತಿದೆ. ಕೂಂಬಿಂಗ್ನಲ್ಲಿ ವಿನಯ್, ಅಸ್ಗರ್ ಆಲಿ, ಶಫತ್ ಆಲಿ ಖಾನ್ ಎಂಬ ಶಾರ್ಪ್ ಟ್ರಾಂಕಲೈಸರ್ಸ್ ಪಾಲ್ಗೊಂಡಿದ್ದಾರೆ.
ಕಳೆದ ಒಂದು ತಿಂಗಳಿಂದಲೂ ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ನರಭಕ್ಷಕ ಹುಲಿ ವಯಸ್ಸಾಗಿರಬೇಕು ಇಲ್ಲವೇ ಬಾಯಿಗೆ ಬಲವಾದ ಪೆಟ್ಟಾಗಿರುವುದರಿಂದಲೇ ಜಾನುವಾರುಗಳನ್ನು ಬಿಟ್ಟು ಮನುಷ್ಯರ ಮೇಲೆ ಎರಗಿದೆ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯವಾಗಿದೆ.
ಹುಲಿ ಸೆರೆ ಹಿಡಿಯುವರೆಗೂ ಮೃತ ಶಿವಲಿಂಗಪ್ಪರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಗ್ರಾಮಸ್ಥರನ್ನು ಮನವೊಲಿಸಿದ್ದು ಹುಲಿ ಸೆರೆಗೆ 2-3 ದಿನ ಕಾಲಾವಕಾಶ ಕೊಡಿ ಎಂದು ಸಿಎಫ್ಒ ಬಾಲಚಂದ್ರ ಗ್ರಾಮದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದಾರೆ.ಮೋಡ ಕವಿದ ವಾತಾವರಣವಿದ್ದು ಒಂದು ವೇಳೆ ಮಳೆ ಬಂದರೆ ಕಾರ್ಯಾಚರಣೆಗೆ ಅಡ್ಡಿಯಾಗುವ ಆತಂಕವೂ ಎದುರಾಗಿದೆ.
ಮಾಜಿ ಸಂಸದ ಧ್ರುವನಾರಾಯಣ ಭೇಟಿ: ಮೃತರ ಕುಟುಂಬಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ ಭೇಟಿ ನೀಡಿ ಕಳೆದ ಬಾರಿ ಅವಘಡವಾದಾಗಲೇ ಕೂಂಬಿಂಗ್ ಸರಿಯಾಗಿ ಮಾಡಬೇಕಿತ್ತು. ಒಂದು ವೇಳೆ ಮಾಡಿದ್ದರೇ ಅನಾಹುತ ತಪ್ಪುತ್ತಿತ್ತು ಎಂದು ಅಸಮಾಧಾನ ಹೊರಹಾಕಿದರು. ತಕ್ಷಣವೇ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯೋನ್ಮುಖರಾಗಬೇಕು, ಪರಿಹಾರವದ ಮೊತ್ತವನ್ನು ಶೀಘ್ರವೇ ಕುಟುಂಬಸ್ಥರಿಗೆ ತಲುಪಿಸಬೇಕು ಎಂದು ಒತ್ತಾಯಿಸಿದರು.