ಚಾಮರಾಜನಗರ: ಪ್ರತ್ಯೇಕ ಪ್ರಕರಣದಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ ಬುಧವಾರ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಓರ್ವ ವಿದ್ಯಾರ್ಥಿನಿಯು ನೆಮ್ಮದಿ ಇಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನಿಬ್ಬರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಮಮತಾ (16) ಎಂಬ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ.
ಡೆತ್ನೋಟ್ನಲ್ಲಿ, ತನಗೆ ಮೂರು ದಿನಗಳಿಂದ ನೆಮ್ಮದಿಯಿಲ್ಲ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾಳೆ. ಪರೀಕ್ಷೆಗಾಗಿ ವಿಶ್ರಾಂತಿಯಿಲ್ಲದೇ ಓದುತ್ತಿದ್ದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮತ್ತೊಂದೆಡೆ ವಿದ್ಯಾರ್ಥಿಯೋರ್ವ ಸಹ ಬಾರದಲೋಕಕ್ಕೆ ತೆರಳಿದ್ದಾನೆ. ಕೊಳ್ಳೇಗಾಲ ತಾಲೂಕಿನ ಲಿಂಗಣಾಪುರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ನಿತಿನ್ (17) ಬೆಂಗಳೂರಿನಿಂದ ಚಿಕ್ಕಮ್ಮನ ಮನೆಗೆ ಬಂದಿದ್ದ. ಈತನ ಆತ್ಮಹತ್ಯೆಗೆ ಕಾರಣವೇನು ಎಂಬುದು ನಿಗೂಢವಾಗಿದ್ದು, ಪೊಲೀಸರ ತನಿಖೆ ಬಳಿಕವಷ್ಟೇ ನಿಜಾಂಶ ತಿಳಿಯಲಿದೆ.
ಇದನ್ನೂ ಓದಿ: ಮನೆ ಕಟ್ಟಲು ತಂದಿದ್ದ ಸಾಲದ ಬಾಧೆ : ಪತಿ-ಪತ್ನಿ ವಿಷ ಸೇವಿಸಿ ಆತ್ಮಹತ್ಯೆ
ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆಯ ಗೀತಾ (24) ಎಂಬ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನಿಗೆ ಕಾಫಿ ಮಾಡಿಕೊಟ್ಟು ಆತ ಹೊರಗಡೆ ಹೋದ ಬಳಿಕ ನೇಣು ಬಿಗಿದುಕೊಂಡಿದ್ದಾಳೆ. ಈಕೆಯ ಸಾವಿಗೂ ಕಾರಣ ಇನ್ನೂ ತಿಳಿದುಬಂದಿಲ್ಲ. ಎರಡು ಪ್ರಕರಣಗಳು ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.