ಚಾಮರಾಜನಗರ: ಪ್ರಾದೇಶಿಕ ಸಂಜೆ ಪತ್ರಿಕೆ ವರದಿಗಾರನ ಮೇಲೆ ಸುಖಾಸುಮ್ಮನೆ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ನಗರದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದ್ರು.
ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಪತ್ರಕರ್ತರು ಬಂಡೀಪುರ ಎಸಿಎಫ್ ಪರಮೇಶ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಗೊಳ್ಳಲು ಬಿಡುವುದಿಲ್ಲ. ಕೂಡಲೇ ಬಂಡೀಪುರ ಎಸಿಎಫ್ ಪರಮೇಶ್ ಮತ್ತು ಅವರ ಜೀಪಿನ ಚಾಲಕನನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವಾರದೊಳಗೆ ಎಸಿಎಫ್ ತಮ್ಮ ತಪ್ಪಿನ ಕುರಿತು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾನಿರತ ಪತ್ರಕರ್ತರು ಎಚ್ಚರಿಸಿದರು.
ಘಟನೆ ಹಿನ್ನೆಲೆ:
ಕಳೆದ ಫೆ. 21 ರಂದು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಬಳಿಯ ಹುಲುಗನಮುರುಡಿ ಬೆಟ್ಟದ ಬಳಿ ಬೆಂಕಿ ಬಿದ್ದಿದೆ ಎಂದು ವರದಿಗಾರ ಆರ್. ಪ್ರಮೋದ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪತ್ರಕರ್ತ ಪ್ರಮೋದ್ ಮನೆಗೆ ಬಂದು ಬೆಂಕಿ ಬಿದ್ದಿರುವ ಸ್ಥಳವನ್ನು ತೋರಿಸಲು ತಮ್ಮ ಜೀಪಿನಲ್ಲಿ ಕರೆದುಕೊಂಡು ಹೋಗುವಷ್ಟರಲ್ಲಿ ಬೆಂಕಿ ನಂದಿ ಹೋಗಿತ್ತು ಎಂದು ತಿಳಿದುಬಂದಿದೆ.
ಬಳಿಕ ಇದು ಅರಣ್ಯ ಭೂಮಿಯಲ್ಲ ಖಾಸಗಿ ಜಮೀನು. ನೀನು ನಮಗೆ ತಪ್ಪು ಮಾಹಿತಿ ನೀಡಿದ್ದೀಯ ಎಂದು ಅವಾಚ್ಯ ಪದಗಳಿಂದ ನಿಂದಿಸಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಂದು ದಿನ ಇರಿಸಿ ಬಲವಂತವಾಗಿ ಅವರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದರು. ಜೊತೆಗೆ, ಎಸಿಎಫ್ ಜೀಪಿನ ಚಾಲಕ ಪ್ರಮೋದ್ ಮೊಬೈಲ್ ಕಸಿದುಕೊಂಡು ದೌರ್ಜನ್ಯ ಎಸಗಿದ್ದ ಎನ್ನಲಾಗ್ತಿದೆ.