ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಥಮ ದರ್ಜೆ ಕಾಲೇಜು ಉಳಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ಪೋಷಕರು, ರೈತರು ಗ್ರಾಮಸ್ಥರು ಧರಣಿ ನಡೆಸಿದ್ದಾರೆ.
ಗ್ರಾಮದ ಶ್ರೀ ಲಕ್ಷ್ಮಿವರದರಾಜಸ್ವಾಮಿ ದೇವಸ್ಥಾನದ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಸರ್ಕಾರಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ಕುಡಿಚಿಗೆ ಸ್ಥಳಾಂತರಿಸಿದ ಆದೇಶವನ್ನು ಖಂಡಿಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ ಮಾತನಾಡಿ, ಪ್ರಮುಖ ಹೋಬಳಿ ಕೇಂದ್ರವಾದ ಗ್ರಾಮದಲ್ಲಿ ಮಾಜಿ ಸಚಿವ ದಿ.ಎಚ್.ಎಸ್.ಮಹದೇವ ಪ್ರಸಾದ್ ಪರಿಶ್ರಮದಿಂದ 2014ರಲ್ಲಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಗಿದ್ದರೂ ಸಮರ್ಪಕ ಕಟ್ಟಡವಿಲ್ಲದ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರಲಿಲ್ಲ.
ಆಡಳಿತ ಮಂಡಳಿ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳ ಪಾಲಕರ ಮನೆಗೆ ತೆರಳಿ ಕಾಲೇಜಿಗೆ ಸೇರಿಸಲು ಮನವೊಲಿಕೆ ಮಾಡದ ಪರಿಣಾಮ ಕಾಲೇಜು ಮುಚ್ಚುವ ಹಂತಕ್ಕೆ ಬಂದಿದೆ. ಆದರೆ ಕಳೆದ ವರ್ಷವೇ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದರೂ ಇನ್ನೂ ಉದ್ಘಾಟನೆ ಮಾಡದೆ ನಿರ್ಲಕ್ಷ್ಯ ವಹಿಸಿ ಕಾಲೇಜು ಮುಚ್ಚಲು ಹುನ್ನಾರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ನಂಜುಂಡಯ್ಯಗೆ ಕಾಲೇಜು ಉಳಿಸಲು ಕ್ರಮಕೈಗೊಳ್ಳಬೇಕು ಎಂಬ ಮನವಿ ಪತ್ರ ಸಲ್ಲಿಸಲಾಯಿತು.