ಬೆಂಗಳೂರು: ರಾತ್ರಿ ಹೊತ್ತು ಮಲಗಲು ಆಶ್ರಯ ಇಲ್ಲದೆ ಬೀದಿಬದಿ ಮಲಗುವ ನಿರಾಶ್ರಿತರಿಗೆ, ಊರು ಬಿಟ್ಟು ನಗರಕ್ಕೆ ಬಂದಿರುವ ಅನಾಥರಿಗೆ, ಹೊರ ರಾಜ್ಯದ ಕಟ್ಟಡ ಕಾರ್ಮಿಕರು ಮೊದಲಾದವರಿಗೆ ರಾತ್ರಿ ವೇಳೆ ಆಶ್ರಯ ನೀಡಲು ಬಿಬಿಎಂಪಿ ನಿರ್ಮಿಸಿಕೊಡುವ ನಿರಾಶ್ರಿತ ಕೇಂದ್ರಗಳ ಸಂಖ್ಯೆ ಹೆಚ್ಚು ಮಾಡಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿ ಪ್ರಸ್ತುತ ಆರು ನಗರ ನಿರಾಶ್ರಿತ ಕೇಂದ್ರಗಳಿದ್ದು, ಇನ್ನೂರು ಜನ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ವಿಶೇಷ ಆಯುಕ್ತ ರಂದೀಪ್, ಗೂಡ್ ಶೆಡ್ ರಸ್ತೆ, ಮರ್ಫಿಟೌನ್ ಹಾಗೂ ವಿಜಯನಗರದ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ನಂತರ ಮಾತನಾಡಿದ ರಂದೀಪ್, ಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗಿದೆ. ಆದ್ರೆ ಕಟ್ಟಡಗಳು ಹಳೆಯದಾಗಿರೋದ್ರಿಂದ ನವೀಕರಣದ ಅಗತ್ಯ. ಹಾಗೇ ಕೆಲ ಬೆಡ್ಗಳು ಹಳೆಯದಾಗಿರೋದ್ರಿಂದ ಬದಲಾಯಿಸಬೇಕಿದೆ. ಆರು ನಿರಾಶ್ರಿತ ಕೇಂದ್ರಗಳನ್ನು ಉತ್ತಮ ಗುಣಮಟ್ಟಕ್ಕೆ ಏರಿಸುವ ಹಾಗೂ ಹತ್ತು ಹೊಸ ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ಪ್ರಯೋಗಿಕವಾಗಿ ಎರಡು ಕಡೆ ಇಂದಿರಾ ಕ್ಯಾಂಟೀನ್ ಕಟ್ಟಡ ಮಾದರಿಯಲ್ಲಿ ಪ್ರೀ ಫ್ಯಾಬ್ರಿಕೇಟೆಡ್ ಕಟ್ಟಡ ನಿರ್ಮಿಸಲಾಗುವುದು. ಹತ್ತು ಹೊಸ ನಿರಾಶ್ರಿತ ಕೇಂದ್ರಗಳಿಗೆ ಈಗಾಗಲೇ ಸ್ಥಳ ಅಂತಿಮಗೊಳಿಸಿರುವ ಪಾಲಿಕೆ, ಮುಂದಿನ ಮೂರು ತಿಂಗಳಲ್ಲಿ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದೆ.
ಸಮೀಕ್ಷೆ ವರದಿ ಪ್ರಕಾರ ನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ನಿರಾಶ್ರಿತರಿದ್ದಾರೆ. ಇದಕ್ಕೆ ಅನುಗುಣವಾಗಿ ಐವತ್ತು ನಿರಾಶ್ರಿತ ಕೇಂದ್ರಗಳು ಬೇಕಾಗುತ್ತವೆ. ಆದರೆ ಈಗ ತುಂಬಾ ಕಡಿಮೆ ಜನರಿಗೆ ಪಾಲಿಕೆ ಆಶ್ರಯ ಕೊಡುತ್ತಿದೆ. ವರ್ಷದೊಳಗೆ ದೆಹಲಿ ಮಾದರಿಯಲ್ಲಿ ಉತ್ತಮ ವ್ಯವಸ್ಥೆ ಇರುವ ನಿರಾಶ್ರಿತ ಕೇಂದ್ರಗಳನ್ನು ಪಾಲಿಕೆ ನಿರ್ಮಿಸಲಿದೆ ಎಂದು ಭರವಸೆ ನೀಡಿದರು.
ಸದ್ಯಕ್ಕೆ ಆರು ನಿರಾಶ್ರಿತ ಕೇಂದ್ರಗಳಿಗೆ 30 ಲಕ್ಷ ವೆಚ್ಚ ಮಾಡುತ್ತಿರುವ ಬಿಬಿಎಂಪಿ, ಗುಣಮಟ್ಟ ಹೆಚ್ಚಿಸಲು ತೀರ್ಮಾನಿಸಿದೆ. ಇದಕ್ಕೆ ಅಗತ್ಯವಾದ ಅನುದಾನವನ್ನು ರಾಜ್ಯ ಸರ್ಕಾರದ ನಲ್ಮ್ ಯೋಜನೆಯಿಂದ ಹಾಗೂ ನಿರ್ವಹಣೆಗೆ ಪಾಲಿಕೆಯ ಕಲ್ಯಾಣ ಯೋಜನೆಯಡಿ ತೆಗೆದುಕೊಳ್ಳಲಾಗುವುದು ಎಂದರು.