ದೊಡ್ಡಬಳ್ಳಾಪುರ : ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆ ಬಿರುಬಿಸಿಲಲ್ಲಿ ಪ್ರಚಾರ ಮಾಡುತ್ತಿರುವ ನಾಯಕರಿಗೆ ದಾಹ ತಣಿಸಲು ಕಾರ್ಯಕರ್ತರು ಎಳನೀರನ್ನು ಕೊಡುತ್ತಿದ್ದು, ನಾಯಕರು ಸ್ಟ್ರಾ ಇಲ್ಲದೆ ಎಳನೀರು ಕುಡಿಯುವ ಮೂಲಕ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ಮಂಡ್ಯದಲ್ಲಿ ಸ್ಟ್ರಾ ಇಲ್ಲದೆ ಮೈತ್ರಿ ಅಭ್ಯರ್ಥಿ ನಿಖಿಲ್ ಎಳನೀರು ಸೇವಿಸಿದ್ದರು. ಈ ಕುರಿತು ಸ್ವತಃ ಬಿಜೆಪಿ ಮುಖಂಡರಾದ ತೇಜಸ್ವಿನಿ ಅನಂತ್ ಕುಮಾರ್, ನಿಖಿಲ್ರವರಿಗೆ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದರು. ಈ ಮೂಲಕ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ತೇಜಸ್ವಿನಿಯವರ ಮೆಚ್ಚುಗೆಯ ಟ್ವೀಟ್ ಹೆಚ್ಚಿನ ಪ್ರಚಾರ ಪಡೆದು ಸ್ಟ್ರಾ ಇಲ್ಲದೆ ಎಳೆನೀರು ಕುಡಿಯೋದು ಟ್ರೆಂಡ್ ಆಗಿದೆ.
![venkata ramanayya](https://etvbharatimages.akamaized.net/etvbharat/images/kn-bng-nel-120319-elaniru-ka10019-guruprasadhp_12042019181239_1204f_01798_263.jpg)
ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ, ನಟ ದರ್ಶನ್ ಇಂದು ಸುಮಲತಾ ಪ್ರಚಾರದ ನಡುವೆ ಸ್ಟ್ರಾ ಇಲ್ಲದೆ ಎಳೆನೀರು ಸೇವನೆ ಮಾಡಿ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಹಾಗೆಯೇ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸಹ ಸ್ಟ್ರಾ ಇಲ್ಲದೆ ಎಳೆನೀರು ಕುಡಿಯುತ್ತಿರುವ ಪೋಟೋ ಸದ್ಯಕ್ಕೆ ಟ್ರೆಂಡಿಂಗ್ ಆಗಿದೆ. ಜೊತೆಗೆ ಶಾಸಕರ ಪೋಟೋಗೆ ಕಾರ್ಯಕರ್ತರಿಂದ ಮೆಚ್ಚುಗೆಯ ಸುರಿಮಳೆ ಕೂಡ ಸಿಕ್ಕಿದೆ.