ಬೆಂಗಳೂರು: ಶತಾಯಗತಾಯ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯದಂತೆ ತಡೆಯಲು ಯತ್ನಿಸುತ್ತಿರುವ ದೋಸ್ತಿ ಸರ್ಕಾರ, ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿ ತಾತ್ಕಾಲಿಕ ನೆಮ್ಮದಿ ಪಡೆದಿದೆ. ಆದರೆ ಒಳಗೊಳಗೇ ಕುದಿಯುತ್ತಿರುವ ಪಕ್ಷದೊಳಗಿನ ಅತೃಪ್ತರ ನಡೆ ಈಗಲೂ ನಿಗೂಢವಾಗಿಯೇ ಇದೆ.
ವಿಶೇಷ ಅಂದರೆ, ಹಿಂದೆ ಮಾಡಿದ ತಪ್ಪು ತಿದ್ದಿಕೊಂಡಿರುವ ಕಾಂಗ್ರೆಸ್, ಒಂದಿಷ್ಟು ನಿಯಮ, ನಿರ್ಬಂಧ ವಿಧಿಸಿ, ಆರ್. ಶಂಕರ್ರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಂಡಿದೆ. ಸಚಿವ ಸ್ಥಾನ ನೀಡುವ ಮುನ್ನವೇ ಶಂಕರ್ ಕಾಂಗ್ರೆಸ್ನಲ್ಲಿ ಕೆಪಿಜೆಪಿಯನ್ನು ವಿಲೀನಗೊಳಿಸಿದ್ದಾರೆ. ಈ ಮೂಲಕ 105 ರಿಂದ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಮರ್ಮಾಘಾತವಾಗಿದೆ.
ಇದುವರೆಗೂ ಪಕ್ಷೇತರರು ತಮ್ಮ ಬುಟ್ಟಿಗೆ ಬೀಳುತ್ತಾರೆ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿಗೆ ಮೈತ್ರಿ ಸರ್ಕಾರ ಒಬ್ಬೊಬ್ಬ ಪಕ್ಷೇತರರಿಗೂ ಸಚಿವ ಸ್ಥಾನ ನೀಡುವ ಮೂಲಕ ಅವಕಾಶವಂಚಿತವಾಗಿಸಿದೆ. ಆದ್ದರಿಂದ ಬಿಜೆಪಿ ದೃಷ್ಟಿ ಸಹಜವಾಗಿ ಅತೃಪ್ತ ಕಾಂಗ್ರೆಸ್ ಶಾಸಕರತ್ತ ನೆಟ್ಟಿದೆ. ಅಲ್ಲದೆ ಕಾಂಗ್ರೆಸ್ ಕೂಡ ಸರ್ಕಾರ ಸುಭದ್ರ ಎಂದು ಭಾವಿಸದೆ, ಎಚ್ಚರಿಕೆಯಿಂದ ಇರುವುದು ಸೂಕ್ತ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಅತೃಪ್ತರ ನಡೆ ನಿಗೂಢ
ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಆರ್. ನಾಗೇಂದ್ರ, ರೋಷನ್ ಬೇಗ್, ಡಾ. ಕೆ. ಸುಧಾಕರ್, ಬಿ. ಸಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ, ಪ್ರತಾಪ್ ಗೌಡ ಪಾಟೀಲ್ ಮತ್ತಿತರರ ನಡೆ ನಿಗೂಢವಾಗಿದೆ.
ಅತೃಪ್ತರಿಗೆ ಸಚಿವ ಸಂಪುಟ ಪುನರ್ ರಚನೆಯಲ್ಲಿ ಅವಕಾಶ ನೀಡುವುದಾಗಿ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರೂ ಹೇಳುತ್ತಲೇ ಬಂದಿದ್ದು, ಇದೀಗ ಸಂಪುಟ ವಿಸ್ತರಣೆಯಲ್ಲಿ ಅಕಸ್ಮಾತ್ ಅವಕಾಶ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ರಾಮಲಿಂಗಾ ರೆಡ್ಡಿ, ಬಿ. ಸಿ. ಪಾಟೀಲ್ ಮತ್ತಿತರರಿಗೆ ತೀವ್ರ ನಿರಾಸೆಯಾಗಿದೆ. ಯಾವುದೇ ಪಕ್ಷದಲ್ಲಿರಲಿ, ವೈಯಕ್ತಿಕ ವರ್ಚಸ್ಸಿನ ಮೇಲೆ ಗೆದ್ದು ಬರುವ ಶಕ್ತಿ ಇರುವ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದು, ಒಮ್ಮೆಲೆ ಸರ್ಕಾರ ಬೀಳಿಸಿ ಆ ಆಪಾದನೆಯನ್ನು ತನ್ನ ಮೇಲೆ ಹೊರಿಸಿಕೊಳ್ಳದೇ, ಒಬ್ಬೊಬ್ಬರೇ ಶಾಸಕರನ್ನು ರಾಜೀನಾಮೆ ಕೊಡಿಸಿ, ಸರ್ಕಾರ ಬಹುಮತ ಕಳೆದುಕೊಳ್ಳುವಂತೆ ಮಾಡಿ, ನಿಧಾನವಾಗಿ ಇನ್ನೊಮ್ಮೆ ಅಧಿಕಾರಕ್ಕೆ ಬರುವ ಯತ್ನ ಬಿಜೆಪಿ ನಡೆಸಿದೆ.
ಬರುವ ಮಳೆಗಾಲದ ಜಂಟಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿ, ಜನರ ಮನಸ್ಸಿನಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯನಿರ್ವಹಣೆ ಬಗ್ಗೆ ಇನ್ನಷ್ಟು ಬೇಸರ ಮೂಡುವಂತೆ ಮಾಡುವ ಉದ್ದೇಶ ಬಿಜೆಪಿಯದ್ದಾಗಿದೆ. ಇದರಲ್ಲಿ ಕಮಲ ಪಕ್ಷಕ್ಕೆ ಯಶಸ್ಸು ಸಿಗದಂತೆ ತಡೆಯುವ ಮತ್ತೊಂದ್ದು ದೊಡ್ಡ ಸವಾಲು ಮೈತ್ರಿ ಸರ್ಕಾರದ ಮೇಲಿದೆ.