ಬೆಂಗಳೂರು: ಶಾಸಕರಾದ ಆನಂದ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನಗೊಳ್ಳುವ ಭೀತಿ ಎದುರಾಗಿದೆ. ಆನಂದ್ ಸಿಂಗ್ ಸೇರಿದಂತೆ ಅತೃಪ್ತ ಶಾಸಕರ ಜತೆ ಸಿಎಂ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಸರ್ಕಾರ ಉಳಿಸಿಕೊಳ್ಳಲು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಆಫರ್ ನೀಡುತ್ತಿದ್ದಾರೆ. ಅತೃಪ್ತರ ಗುಂಪಿನಲ್ಲಿದ್ದ ಶಾಸಕ ನಾಗೇಂದ್ರ ಜತೆ ವೇಣುಗೋಪಾಲ್ ಮಾತನಾಡಿ, ಪಕ್ಷಕ್ಕೆ ರಾಜೀನಾಮೆ ನೀಡಬಾರದು. ನಿಮಗೆ ಸಚಿವ ಸ್ಥಾನ ನೀಡಲಾಗುವುದೆಂದು ಭರವಸೆ ನೀಡಿದ್ದಾರೆ. ಹಾಗೆಯೇ ಮುಖ್ಯಮಂತ್ತಿ ಕುಮಾರಸ್ವಾಮಿ ಅವರು ಅಮೆರಿಕದಿಂದಲೇ ಶಾಸಕ ನಾಗೇಂದ್ರ ಅವರಿಗೆ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ. ಮೈತ್ರಿ ಸರ್ಕಾರ ಭಾಗವಾಗಿರುವಂತೆ ಕೇಳಿಕೊಂಡಿದ್ದಾರೆಂದು ಹೇಳಲಾಗ್ತಿದೆ.
ಆನಂದ್ ಸಿಂಗ್, ರಮೇಶ್ ಜಾರಕಿಹೊಳಿಯ ಅವರೊಂದಿಗೆ ಆಪ್ತ ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಕಂಪ್ಲಿ ಗಣೇಶ್, ಬಿ ಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಅತೃಪ್ತ ಶಾಸಕರ ಜತೆ ಇವರಿಬ್ಬನ್ನು ಸಂಪರ್ಕಿಸಿ ಮನವೊಲಿಸುತ್ತಿದ್ದಾರೆ ಎನ್ನಲಾಗ್ತಿದೆ.
ಶಾಸಕ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ನವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಳಿ ವರದಿ ಕೇಳಿದ್ದಾರೆ. ಹೀಗಾಗಿ ಶಾಸಕರ ರಾಜೀನಾಮೆ ಪರಿಸ್ಥಿತಿ ನಿಭಾಯಿಸಲು ವೇಣುಗೋಪಾಲ್ ನಾಳೆ ಬೆಂಗಳೂರಿಗೆ ಆಗಮಿಸಿ ಅತೃಪ್ತ ಕಾಂಗ್ರೆಸ್ ಶಾಸಕರ ಜತೆ ಖುದ್ದಾಗಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.