ಬೀದರ್: ಕಳೆದ ತಿಂಗಳು ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಆರಂಭಕ್ಕೂ ಮುನ್ನ ಸಾವನ್ನಪ್ಪಿದ ಒಲ್ಡ್ ಸಿಟಿ ನಿವಾಸಿಯಲ್ಲಿ ಕೊವಿಡ್-19 ಸೋಂಕಿತ್ತು. ಆದರೆ ಜಿಲ್ಲಾಡಳಿತ ಮೊದಲು ಆ ವ್ಯಕ್ತಿಯನ್ನು ಎರಡು ಬಾರಿ ಪರಿಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು. ನಂತರ ಆತನನ್ನು ಹೈದರಾಬಾದ್ ಆಸ್ಪತ್ರೆಯಲ್ಲಿ ಕುಟುಂಬಸ್ಥರು ದಾಖಲಿಸಿದ್ದರು. ಈ ವೇಳೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಸತ್ಯ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಿದಾಗ, ಮೃತ ವ್ಯಕ್ತಿ ತೆಲಂಗಾಣದಲ್ಲಿ ಸಾವನ್ನಪ್ಪಿದಕ್ಕೆ ನಮ್ಮ ಜಿಲ್ಲಾಡಳಿತ ಪ್ರಾಥಮಿಕ ಹಾಗೂ ಎರಡನೇ ಹಂತದ ಎಲ್ಲಾ ಸಂಪರ್ಕಿತರನ್ನು ಕ್ವಾರಂಟೆನ್ ಮಾಡಿದೆ.
ಪಾದರಾಯನಪುರ ಗಲಾಟೆ ತಪ್ಪಿತಸ್ಥರ ಮೇಲೆ ಕ್ರಮ:
ಬೆಂಗಳೂರಿನ ಪಾದರಾಯನಪುರ ಗಲಾಟೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ. ಸರ್ಕಾರ ಆ ಭಾಗದಲ್ಲಿ ಕೈಗೊಂಡ ಕ್ರಮಕ್ಕೆ ತಮ್ಮ ಬೆಂಬಲವಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾದರೆ ಅಂಥವರಿಗೆ ಕ್ಷಮೆ ಇಲ್ಲ. ತಪ್ಪು ಯಾರೇ ಮಾಡಿದ್ದರು ಶಿಕ್ಷೆ ಕೊಡಿ ಎಂದರು.
ಚೀನಾ ಕಿಟ್ ಕಳಪೆ, ಖಂಡ್ರೆ ಗರಂ:
ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ಬಳಸಲಾಗುತ್ತಿರುವ ಕಿಟ್ಗಳು ಕಳಪೆ ಎಂದು ಗೊತ್ತಿದ್ದರೂ ಸರ್ಕಾರ ಯಾಕೆ ಖರೀದಿ ಮಾಡಿದೆ ಎಂದು ಖಂಡ್ರೆ ಅಸಮಾಧಾನ ಹೊರ ಹಾಕಿದರು.
ಬ್ರೀಮ್ಸ್ನಲ್ಲಿ ಕೊರೊನಾ ಪರೀಕ್ಷಾ ಕೇಂದ್ರಕ್ಕೆ ಆಗ್ರಹ:
ಲಾಕ್ಡೌನ್ ಶುರುವಾಗಿ ಒಂದು ತಿಂಗಳಾಗಿದೆ. ರಾಜ್ಯದಲ್ಲಿ ಕೇವಲ 18 ಕಡೆಯಲ್ಲಿ ಕೊರೊನಾ ವೈರಸ್ ಪರೀಕ್ಷಾ ಕೇಂದ್ರಗಳಿವೆ. ಹೀಗಾಗಿ ಬ್ರೀಮ್ಸ್ ಆಸ್ಪತ್ರೆಯ ಲ್ಯಾಬ್ನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲಿ ಎಂದು ಈಶ್ವರ್ ಖಂಡ್ರೆ ಸರ್ಕಾರಕ್ಕೆ ಆಗ್ರಹಿಸಿದರು.
ಬೀದರ್ನಿಂದ ಬೆಂಗಳೂರು ಪ್ರವಾಸ ಮಾಡಿ ರಕ್ತ ಹಾಗೂ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಬೇಕು. ಬೀದರ್ನಲ್ಲಿ 26 ಸಾವಿರಕ್ಕೂ ಅಧಿಕ ಸ್ಯಾಂಪಲ್ ಪಡೆಯಲಾಗಿದೆ. ಈಗಾಗಲೇ ಕಳುಹಿಸಲಾದ ಸ್ಯಾಂಪಲ್ಗಳಲ್ಲಿ 1,074 ವರದಿ ಬರೋದು ಬಾಕಿ ಇದೆ. ಹೀಗಿರುವಾಗ ಬೀದರ್ ಬ್ರೀಮ್ಸ್ ಆಸ್ಪತ್ರೆಯ ಲ್ಯಾಬ್ನಲ್ಲಿ ಒಂದೆರಡು ಕೋಟಿ ಖರ್ಚು ಮಾಡಿ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.