ವಿಜಯನಗರ: ಹುಟ್ಟುತ್ತ ಅಣ್ಣ-ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಅನ್ನೋ ಮಾತಿದೆ. ಈ ಮಾತಿಗೆ ಸಾಕ್ಷಿ ಎಂಬಂತಹ ಘಟನೆಯೊಂದು ವಿಜಯನಗರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಆಸ್ತಿ ಹಂಚಿಕೆ ವಿಚಾರಕ್ಕೆ ಸಹೋದರರ ನಡುವೆ ಉಂಟಾದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯ ಕಂಡಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೊಂಡೇನಹಳ್ಳಿ ಗ್ರಾಮದಲ್ಲಿ ಕುಡುಗೋಲಿನಿಂದ ಕೊಚ್ಚಿ ಅಣ್ಣನೇ ತಮ್ಮನನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಕೊಲೆಯಾದ ವ್ಯಕ್ತಿಯನ್ನು ಭರಮಪ್ಪ (66) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಸಹೋದರ ಉಲವತ್ತಿ ಸೋಮಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಷಯವಾಗಿ ಅಣ್ಣ- ತಮ್ಮನ ನಡುವೆ ವಿವಾದ ಕೆಲವು ವರ್ಷಗಳಿಂದ ವಿವಾದ ಇತ್ತು. ಈ ಪ್ರಕರಣವು ನ್ಯಾಯಾಲಯದ ಮೆಟ್ಟಿಲು ಏರಿತ್ತು. ಈ ನಡುವೆ ಆಸ್ತಿ ವಿವಾದ ತಾರಕಕ್ಕೇರಿದ್ದು, ತಮ್ಮ ಭರಮಪ್ಪನನ್ನು ಅಣ್ಣ ಸೋಮಪ್ಪ ಕುಡುಗೋಲಿನಿಂದ ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.