ಬೆಳಗಾವಿ : ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಇಂದಿಗೆ 3ನೇ ದಿನಕ್ಕೆ ಕಾಲಿರಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಕುಟುಂಬಸ್ಥರು ಸಾಥ್ ನೀಡುತ್ತಿದ್ದಾರೆ. ತಮ್ಮ ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಇಂದು ಮಧ್ಯರಾತ್ರಿ ಎಲ್ಲ ಸಾರಿಗೆ ನೌಕರರನ್ನು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದರು.
ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರ ಎಚ್ಚರಿಕೆಗೆ ಕ್ಯಾರೇ ಎನ್ನದೆ ಕುಟುಂಬ ಸಮೇತರಾಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಾರಿಗೆ ನೌಕರರು ತಮ್ಮ ಮಕ್ಕಳನ್ನು ಭುಜದ ಮೇಲೆ ಕೂಡಿಸಿಕೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಓದಿ :‘ಸಾರಿಗೆ’ ಶಾಕ್.. ಸಾರಿಗೆ ಸಚಿವ ಸವದಿ ನೇತೃತ್ವದಲ್ಲಿ ಅಧಿಕಾರಿಗಳ ಮಹತ್ವದ ಸಭೆ ಆರಂಭ
ಈ ವೇಳೆ ಸಾರಿಗೆ ಸಿಬ್ಬಂದಿಯೊಬ್ಬರ ಪತ್ನಿಯೊಬ್ಬರು, ನಮ್ಮ ಕುಟುಂಬಗಳು ಬೀದಿಗೆ ಬಂದಿವೆ. ನಮ್ಮ ನೋವು ಸರ್ಕಾರ ಕೇಳುತ್ತಿಲ್ಲ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಖಾಸಗಿ ಬಸ್ಗಳನ್ನ ಓಡಿಸಿದ್ರೇ ಬಸ್ ಚಕ್ರಕ್ಕೆ ತಲೆಕೊಡಲು ಸಿದ್ದವಾಗಿದ್ದೇವೆ. ಕುಟುಂಬ ಸಮೇತರಾಗಿ ಎಲ್ಲದಕ್ಕೂ ತಯಾರಾಗಿಯೇ ಪ್ರತಿಭಟನೆಗೆ ಬಂದಿದ್ದೇವೆ.
ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೂಡುತ್ತೇವೆ. ಇದ್ರಲ್ಲಿ ನಮ್ಮ ಪ್ರಾಣ ಹೋದ್ರೂ ಸಿದ್ದರಿದ್ದೇವೆ. ವೇತನ ಹೆಚ್ಚಳ ಮಾಡಿ ಸರ್ಕಾರಿ ನೌಕರರನ್ನಾಗಿ ಮಾಡುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.