ಚಿಕ್ಕೋಡಿ (ಬೆಳಗಾವಿ): ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಮೊದಲ ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು ಇಂದು ಆ ಸಂಖ್ಯೆ 601ಕ್ಕೆ ಏರಿದೆ. ಲಾಕ್ಡೌನ್ನಿಂದ ಕಷ್ಟಪಡುತ್ತಿರುವ ಜನರಿಗೆ ಸಹಾಯ ಮಾಡಲು ಸೆಲಬ್ರಿಟಿಗಳು, ಸಂಘಸಂಸ್ಥೆಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ದೇಣಿಗೆ ನೀಡುತ್ತಿದ್ದಾರೆ.
ಕೊರೊನಾ ಪರಿಹಾರ ನಿಧಿಗೆ ಮಠ ಮಾನ್ಯಗಳು ಕೂಡಾ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದರು. ಈ ಹಿನ್ನೆಲೆ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಕಾಡಸಿದ್ದೇಶ್ವರ ಮಠದಿಂದ ಕೊರೊನಾ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ಮಠದಲ್ಲಿ ಸಿಎಂ ಪರಿಹಾರ ನಿಧಿಗೆ ಹಣ ನೀಡಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ವಿಶ್ವಾದ್ಯಂತ ಕೊರೊನಾ ವೈರಸ್ ಬಹಳಷ್ಟು ಅನಾಹುತ ಸೃಷ್ಟಿಸಿದೆ. ಈ ವೈರಸ್ನಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ, ಭಾರತಕ್ಕೆ ಕೂಡಾ ಕಾಲಿಟ್ಟು ಬಹಳಷ್ಟು ಸಾವು ನೋವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈರಸ್ ನಿಯಂತ್ರಣಕ್ಕಾಗಿ ಸಮರ್ಪಕವಾಗಿ ಕೆಲಸವನ್ನೂ ಮಾಡುತ್ತಿದೆ. ಸಿಎಂ ಮನವಿ ಮಾಡಿದಂತೆ ಇತರ ಮಠಗಳು ಕೂಡಾ ಕೊರೊನಾ ವೈರಸ್ ತಡೆಗಟ್ಟಲು ಕೈಲಾದಷ್ಟು ಸಹಾಯ ಮಾಡಿ ಎಂದು ಶ್ರೀಶೈಲ ಜಗದ್ಗುರುಗಳು ಕರೆ ನೀಡಿದರು.