ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನೀರಸ ಪ್ರದರ್ಶನದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಬಹುಮತ ಪಡೆದಿರುವುದು ಆಶ್ಚರ್ಯದ ಸಂಗತಿ ಏನಲ್ಲ. ಯಾರೂ ಗೆಲ್ಲಬೇಕಿತ್ತೊ ಅವರು ಗೆದ್ದಿಲ್ಲ. ಅದರ ಲಾಭ ಬಿಜೆಪಿಗೆ ಆಗಿದೆಯಷ್ಟೇ. ಆದರೆ, ಪಾಲಿಕೆ ಚುನಾವಣೆ ಗೆಲುವನ್ನೇ ತಮ್ಮ ಸಾಧನೆ ಎಂದು ಬಿಜೆಪಿಗರು ಬೀಗುತ್ತಿರುವುದು ಸರಿಯಲ್ಲ. ಪ್ರಥಮ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ವಿ, ನಮ್ಮ ಸಾಧನೆಗೆ ತೃಪ್ತಿ ಇದೆ. ಕಾಂಗ್ರೆಸ್ 15, ನಮ್ಮ ಬೆಂಬಲಿತರು ಐವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ನಮ್ಮದಿತ್ತು. ಪಕ್ಷದ ಚಿಹ್ನೆ ಮೇಲೆ 10 ಅಭ್ಯರ್ಥಿಗಳು, ಐವರು ನಮ್ಮ ಬೆಂಬಲಿತ ಪಕ್ಷೇತರರು ಗೆದ್ದಿದ್ದಾರೆ ಎಂದರು.
ನಮ್ಮಲ್ಲಿನ ಹೊಂದಾಣಿಕೆ ಕೊರತೆಯಿಂದ 8 ಸ್ಥಾನ ಕಳೆದುಕೊಂಡೆವು. ಬೆಳಗಾವಿ ದಕ್ಷಿಣದಲ್ಲಿ 5, ಉತ್ತರದಲ್ಲಿ ಮೂವರು ಸೋಲಲು ಹೊಂದಾಣಿಕೆ ಕೊರತೆಯೇ ಕಾರಣ. ನಾವು ಅಂದುಕೊಂಡಿದ್ದನ್ನು ಪಾಲಿಕೆ ಚುನಾವಣೆಯಲ್ಲಿ ಸಾಧಿಸಿದ್ದೇವೆ. ಆದರೆ, ಎಂಇಎಸ್ನಲ್ಲಿನ ಬಂಡಾಯದ ಲಾಭ ಬಿಜೆಪಿಗೆ ಆಗಿದೆಯಷ್ಟೇ. ಒಂದೇ ವಾರ್ಡ್ಗೆ ಎಂಇಎಸ್ ನ ನಾಲ್ವರು ಸ್ಪರ್ಧಿಸಿದ್ದೇ ಬಿಜೆಪಿಯ ಈ ಸಾಧನೆಗೆ ಕಾರಣ ಎಂದು ತಿಳಿಸಿದರು.
ಪಾಲಿಕೆಯ ಗೆಲುವನ್ನೇ ಲೋಕಸಭೆ ಗೆದ್ದ ಹಾಗೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ಬಂದಷ್ಟೇ ಮತಗಳು ಈಗಲೂ ಎಲ್ಲರಿಗೂ ಹಂಚಿಕೆ ಆಗಿವೆ. ಮತ ಹಂಚಿಕೆಯಲ್ಲಿ ಈ ಸಲವೂ ಯಾವುದೇ ವ್ಯತ್ಯಾಸವಾಗಿಲ್ಲ. ಎಂಇಎಸ್ ನಾಯಕರು ಮಾಡಿರುವ ತಪ್ಪಿನಿಂದ ಬಿಜೆಪಿಗೆ ಲಾಭವಾಗಿದೆ. ಎಂಇಎಸ್ ತಪ್ಪನ್ನು ಕಾಂಗ್ರೆಸ್ ತಲೆಗೆ ಕಟ್ಟುವುದು ಸರಿಯಲ್ಲ. ಬಿಜೆಪಿಯ ಜಯವನ್ನು ಕಾಂಗ್ರೆಸ್ ವೈಫಲ್ಯ ಎನ್ನಬೇಡಿ. ನಾವು ಶಕ್ತಿಮೀರಿ ಸಾಧನೆ ಮಾಡಿದ್ದೇವೆ. ಈ ಚುನಾವಣೆ ಮೂಲಕ ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಬೇಸ್ ಕ್ರಿಯೇಟ್ ಮಾಡಿದ್ದೇವೆ ಎಂದರು.
ಫಲಿತಾಂಶದ ವಿರುದ್ಧ ಕೆಲ ಪರಾಜಿತ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಾವ ಪಕ್ಷಕ್ಕೆ ಎಷ್ಟು ಮತ ಬಂದಿವೆ ಎಂದು ಪರಿಶೀಲಿಸಬೇಕು. ಇದರಲ್ಲೇ ಎಲ್ಲರಿಗೂ ಉತ್ತರ ಸಿಗುತ್ತದೆ. ಕೋರ್ಟ್ಗೆ ಹೋಗುವುದರಿಂದ ಯಾವುದೇ ಲಾಭವಿಲ್ಲ. ಕಳೆದ ಸಲ ಎಂಇಎಸ್ 32 ಗೆದ್ದಿತ್ತು. ಈಗ 2 ಗೆದ್ದಿದೆ. ಎಂಇಎಸ್ ಗೆ ಆಗಿರುವ ನಷ್ಟವೇ ಬಿಜೆಪಿಗೆ ಲಾಭವಾಗಿದೆ. ನಾವು ಎಂಟು ಸ್ಥಾನ ಕಳೆದುಕೊಳ್ಳಲು ನಮ್ಮಲ್ಲಿನ ಹೊಂದಾಣಿಕೆ ಕೊರತೆಯೇ ಕಾರಣ. ಚುನಾವಣೆ ಸೋಲಿನ ಬಗ್ಗೆ ಶೀಘ್ರವೇ ಆತ್ಮಾವಲೋಕನ ಮಾಡುತ್ತೇವೆ. ಎಂಇಎಸ್ ನವರು ಭಾಷಾ ರಾಜಕಾರಣ ಬಿಟ್ಟು, ಅಭಿವೃದ್ಧಿ ಪರ ಬದಲಾಗಬೇಕು ಎಂದು ಸಲಹೆ ನೀಡಿದರು.
ಬಣ ರಾಜಕೀಯ ಒಪ್ಪಿಕೊಂಡ ಸತೀಶ್
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಬಣ ರಾಜಕೀಯ ಕಾರಣ ಎಂಬುದನ್ನು ಸತೀಶ್ ಜಾರಕಿಹೊಳಿ ಒಪ್ಪಿಕೊಂಡರು. ಮಾಜಿ ಶಾಸಕ ಫಿರೋಜ್ ಸೇಠ್ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಹೊಂದಾಣಿಕೆ ಕೊರತೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೊಂದಾಣಿಕೆ ಇರದ ಹಿನ್ನೆಲೆ ಬೆಳಗಾವಿ ದಕ್ಷಿಣದಲ್ಲಿ 3, ಉತ್ತರದಲ್ಲಿ 5 ಕ್ಷೇತ್ರ ಕಳೆದುಕೊಂಡಿದ್ದೇವೆ.
ಕಾಂಗ್ರೆಸ್ ಸೋಲು ಲೀಡರ್ಸ್ ಫೇಲ್ಯೂರ್ ಅಂತಾ ಹೇಳಕ್ಕಾಗಲ್ಲ. ನಮ್ಮ ಶಕ್ತಿ ಲಿಮಿಟೆಡ್ ಇದೆ ಅಂತ ಗೊತ್ತಿತ್ತು. ಅಷ್ಟಕ್ಕೆ ಸೀಮಿತವಾಗಿ ಸ್ಪರ್ಧೆ ಮಾಡಿದ್ದೇವೆ. ಮಾಜಿ ಶಾಸಕ ಫಿರೋಜ್ ಸೇಠ್ ಜೊತೆ ಹೊಂದಾಣಿಕೆ ಕೊರತೆ ಬಗ್ಗೆ ಸತೀಶ್ ಪರೋಕ್ಷವಾಗಿ ಒಪ್ಪಿಕೊಂಡರು. ಕಾಂಗ್ರೆಸ್ ಗೆ ವೋಟ್ ಹಾಕಬೇಡಿ ಅಂತ ನಾಯಕರು ಹೇಳಿದ್ದು ಸತ್ಯ ಎಂದರು.