ಬೆಳಗಾವಿ: ವಿಜಯ ದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಕುಂದಾನಗರಿಯಲ್ಲಿ ನಡೆದ ಭವ್ಯ ಪಥಸಂಚಲನ ಗಮನ ಸೆಳೆಯಿತು.
ನಗರದ ಲಿಂಗರಾಜ ಕಾಲೇಜಿನಿಂದ ಪ್ರಾರಂಭವಾದ ಆರ್ಎಸ್ಎಸ್ ಪಥಸಂಚಲನ ಕಂಗ್ರಾಳ ಗಲ್ಲಿ, ಕಾಕತಿವೇಸ್, ಶನಿವಾರಕೂಟ, ಖಡೇ ಬಜಾರ್, ಭುರುಡ ಗಲ್ಲಿ, ಸಮಾದೇವಿ ಗಲ್ಲಿ, ಗೊಂಧಳಿ ಗಲ್ಲಿ, ಮಾರುತಿ ಗಲ್ಲಿ ಮಾರ್ಗವಾಗಿ ಗಾಂಧಿ ಭವನಕ್ಕೆ ಸಮಾಪ್ತಿಗೊಂಡಿತು. ಪಥಸಂಚಲನ ಸಾಗುತ್ತಿರುವ ರಸ್ತೆಗಳಲ್ಲಿ ಸ್ಥಳೀಯರು ಬಿಡಿಸಿದ ಆಕರ್ಷಕ ರಂಗೋಲಿ ಗಮನ ಸೆಳೆದವು. ಗಣವೇಷಧಾರಿಗಳನ್ನು ಪುಷ್ಪವೃಷ್ಟಿಗೈದು ಸ್ವಾಗತಿಸಿದ್ದು ವಿಶೇಷವಾಗಿತ್ತು. ಈ ವೇಳೆ ವಾದ್ಯಗಳು ಪಥಸಂಚಲನಕ್ಕೆ ಇನ್ನಷ್ಟು ಮೆರಗು ತಂದವು.
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ ಸೇರಿದಂತೆ ಬಿಜೆಪಿ ಮುಖಂಡರು ಗಣವೇಷ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಬಳಿಕ ಗಾಂಧಿ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಕ್ಷಿಣ ಮಧ್ಯ ಕ್ಷೇತ್ರ ಪ್ರಚಾರಕ ಶ್ಯಾಮ್ ಕುಮಾರ್ ಮುಖರ್ಜಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು. ಬೆಳಗಾವಿ ಸಂಘ ಚಾಲಕ ಬಾಳಣ್ಣ ಕಗ್ಗಣಗಿ ಉಪಸ್ಥಿತರಿದ್ದರು.