ಚಿಕ್ಕೋಡಿ: ರಾಜ್ಯ ಸರ್ಕಾರ, ಮಹಾರಾಷ್ಟ್ರದ ಜೊತೆಗೆ ಮಾತುಕತೆ ನಡೆಸಿ ಕೃಷ್ಣಾ ನದಿಗೆ ತಕ್ಷಣ ನೀರು ಬಿಡಿಸಬೇಕು, ಇಲ್ಲವಾದ್ರೆ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ರೈತ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.
ನದಿ ತೀರದ ಸುತ್ತಮುತ್ತಲ ಜನರು ಕುಡಿಯುವ ನೀರು ಸಿಗದೆ ಕಿ.ಮೀ ಗಳಷ್ಟು ದೂರ ಅಲೆದಾಡುವ ಪರಿಸ್ಥಿತಿ ತಲೆದೋರಿದೆ. ಹಾಗಾಗಿ, ಆದಷ್ಟು ಬೇಗ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದ ಮುಖಾಂತರ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿದುಬರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಕೃಷ್ಣಾ ತೀರದ ಮಾಂಜರಿ, ಯಡೂರ, ಚಂದೂರ, ಇಂಗಳಿ ಹಾಗೂ ರಾಯಬಾಗ ತಾಲೂಕಿನ ನಸಲಾಪುರ, ಭಾವನಾ, ಸೌಂದತ್ತಿ, ದಿಗ್ಗೇವಾಡಿ, ಜಲಾಲಪುರ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಗ್ರಾಮದ ರೈತರು ಬರುವ ಮೇ 2 ರಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಹತ್ತಿರ ಇರುವ ಚಿಕ್ಕೋಡಿ ಸಾಂಗ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.