ಅಥಣಿ: ತಾಲೂಕಿನ ಹಲವಾರು ಗ್ರಾಮಗಳಲ್ಲಿ ಹಲವು ಕಾಮಗಾರಿಗಳಿಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭೂಮಿ ಪೂಜೆ ನೆರವೇರಿಸಿ ಅಂದಾಜು 7 ಕೋಟಿ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಿದರು.
ಅಥಣಿ ಪಟ್ಟಣದ ಅಡ್ಡರ ಕಾಲೋನಿ, ತಾಲೂಕಿನ ಬಡಚಿ, ದಬದಬಹಟ್ಟಿ, ಅಡಹಳ್ಳಿ, ಯಂಕಂಚಿ, ಕೋಟ್ಟಲಗಿ, ಯಲಿಹಡಲಗಿ, ತೇಲಸಂಗ, ಪರತರವಾಡಿ, ಹಾಲಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ಶಾಸಕ ಮಹೇಶ್ ಕುಮಟಳ್ಳಿ ಈಟಿವಿ ಭಾರತದ ಜೊತೆ ಮಾತನಾಡಿ, ಬಿಎಸ್ವೈ ಸರ್ಕಾರ ಅಥಣಿ ಮೇಲೆ ವಿಶೇಷ ಕಾಳಜಿಯಿಂದ ಅನುದಾನದ ಕೊರತೆ ಇಲ್ಲದೆ ಇರುವುದರಿಂದ ತಾಲೂಕಿನಲ್ಲಿ ಸರಾಗವಾಗಿ ಕಾಮಗಾರಿ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಜನರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಬಹುದಿನದ ಬೇಡಿಕೆಯಾದ ಕೋಟ್ಟಲಗಿ, ಅಮಜೇಶ್ವರಿ ಏತ ನೀರಾವರಿ ಯೋಜನೆಗೆ ಕೆಎನ್ಎನ್ ಬೋರ್ಡ್ ಅನುಮತಿ ನೀಡಿದೆ. ನಮಗೆ ತುಂಬಾ ಸಂತೋಷವಾಗಿದೆ ಹಾಗೂ ಈ ಭಾಗದ ರೈತರಿಗೆ ಸಂತೋಷದ ವಿಷಯವಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮುಂಬರುವ ದಿನಗಳಲ್ಲಿ ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.