ಗೋಕಾಕ: ನಗರದಲ್ಲಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸಮೇತ ಆರು ಜನರನ್ನು ಪೊಲೀಸರು ಬಂಧಿಸಿದ ಘಟನೆ ಜರುಗಿದೆ.
ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ ಅಲಿಯಾಸ್ ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ, ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ ಕುಮಾರ್ ಬೆಳಗಾಂವಕರ ಅಲಿಯಾಸ್ ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ, ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.
ಬಾಗೇವಾಡಿ ಗ್ರಾಮದ ಓರ್ವ ಯುವಕನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಗ್ಯಾಂಗ್ ಮಹಿಳೆಯೊಂದಿಗೆ ಯುವಕನ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಒಪ್ಪದ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಮೈಮೇಲಿದ್ದ ಬಂಗಾರದ ಸರ ಹಾಗೂ 1 ಸಾವಿರ ರೂಪಾಯಿ ಕಸಿದುಕೊಂಡಿದ್ದಾರೆ. ಅಲ್ಲದೇ 3 ಲಕ್ಷ ಹಣ ನೀಡದಿದ್ದರೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾರೆ. ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡ ಯುವಕ ತನ್ನ ಗ್ರಾಮಕ್ಕೆ ತೆರಳಿ ತನ್ನ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ.
ಯುವಕನಿಂದ ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಗುರುನಾಥ್ ಚವ್ಹಾಣ್ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.