ಚಿಕ್ಕೋಡಿ : ಆ್ಯಪ್ ಮೂಲಕ ದಿನಸಿ ವಸ್ತುಗಳ ಸರಬರಾಜು ಮಾಡುತ್ತಿರುವುದರಿಂದ ಕಡು ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಕೆಆರ್ಡಿಸಿಎಲ್ ಮಾಜಿ ಉಪಾಧ್ಯಕ್ಷ ಮಹಾವೀರ ಮೋಹಿತೆ ಹಾಗೂ ಪುರಸಭೆ ಸದಸ್ಯ ಶ್ಯಾಮ ರೇವಡೆ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್ಡೌನ್ ಹಿನ್ನೆಲೆಯಲ್ಲಿ ಕಿರಾಣಿ ಅಂಗಡಿಗಳ ವೇಳೆ ಬೆಳಗ್ಗೆ 5 ರಿಂದ 9ರವರೆಗೆ ಸಮಯ ನಿಗದಿ ಮಾಡಿರುವುದು ಸರಿಯಲ್ಲ. ಜನ ಬೆಳಗ್ಗೆ ಇನ್ನೂ ಎದ್ದೇ ಇರುವುದಿಲ್ಲ, ಅಷ್ಟರಲ್ಲಿ ಕಿರಾಣಿ ಅಂಗಡಿಗೆ ಜನ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅನೂಕೂಲ ಕಲ್ಪಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ಡ್ನ್ ಮಾಡಲಾಗಿದೆ. ಆದರೆ, ಅರ್ಧ ಕೆಜಿ ಎಣ್ಣೆ, ಬೇಳೆಕಾಳು ಬೇಕಾದ ಕಡು ಬಡವರು ಆ್ಯಪ್ ಬಳಕೆ ಮಾಡಿ ಆರ್ಡರ್ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಎರಡು ದಿನದಲ್ಲಿ ಆ್ಯಪ್ ಬಳಕೆ ಮಾಡುವುದನ್ನು ಬಂದ್ ಮಾಡಬೇಕು. ಬೆಳಗ್ಗೆ 7 ರಿಂದ 10 ಗಂಟೆವರೆಗೆ ಕಿರಾಣಿ ಹಾಗೂ ಹೋಲ್ಸೇಲ್ ಅಂಗಡಿಗೆ ಸಮಯ ನಿಗದಿ ಮಾಡಬೇಕು. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ಕುರಿತು ಪೊಲೀಸರು ಇದರ ಬಗ್ಗೆ ಹೆಚ್ಚಿನ ನಿಗಾವಹಿಸಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಆ್ಯಪ್ ಬಿಟ್ಟು ಅಗತ್ಯ ವಸ್ತುಗಳ ದಿನಸಿ ಅಂಗಡಿಗಳ ಪ್ರಾರಂಭಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.